ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಈ ಕುರಿತು ಭಾರತೀಯ ಸೇನೆಯ ಚಿನಾರ್‌ ಕಾರ್ಪ್ಸ್‌ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಕೆರಾನ್‌ನಲ್ಲಿ ಒಳನುಸುಳುವಿಕೆ ಬಗ್ಗೆ ಗುಪ್ತಚರ ಮೂಲಗಳಿಂದ ಖಚಿತ ಮಾಹಿತಿ ಪಡೆದ ಸೇನೆ ʻಆಪರೇಷನ್ ಪಿಂಪಲ್ʼ ಹೆಸರಿನಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಶುರು ಮಾಡಿದೆ ಎಂದು ತಿಳಿಸಿದೆ.

ಕುಪ್ವಾರದ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಗಳನ್ನ ಪತ್ತೆಹಚ್ಚಿದ್ದವು. ಅಷ್ಟರಲ್ಲಿ ಉಗ್ರರು ಮನಸೋ ಇಚ್ಛೆ ಗುಂಡು ಹಾರಿಸಲು ಶುರು ಮಾಡಿದರು. ಬಳಿಕ ಸೇನೆಯಿಂದಲೂ ಪ್ರತಿದಾಳಿ ನಡೆಸಿದ ಪರಿಣಾಮ ಇಂದು ಬೆಳಗ್ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.

ಇಬ್ಬರು ಉಗ್ರರನ್ನು ಹತ್ಯೆಗೈದಿರುವ ಸೇನೆ ʻಆಪರೇಷನ್‌ ಪಿಂಪಲ್‌ʼ ಕಾರ್ಯಾಚರಣೆಯನ್ನ ಮುಂದುವರಿಸಿದೆ. ನುಸುಳುಕೋರರ ಸುಳಿವು ಪತ್ತೆಹಚ್ಚಲು ಕುಪ್ವಾರದ ಕೆರಾನ್‌ ಪ್ರದೇಶದ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದೆ.