ರಾಯ್ಪುರ: ಛತ್ತೀಸ್ಗಢದಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸಕ್ಕೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನ ಸ್ಫೋಟಿಸಿದ ಕಾರಣ ಯೋಧರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಸುಕ್ಮಾ ಜಿಲ್ಲೆಯ ಸಿಲ್ಗರ್ ಹಾಗೂ ತೆಕುಲಗುಡೆಮ್ ಪ್ರದೇಶದ ಮಧ್ಯೆ ಮಾವೋವಾದಿಗಳು ಐಇಡಿ ಇರಿಸಿದ್ದರು. ಸಿಆರ್ಪಿಎಫ್ ವಾಹನವು ಪ್ರದೇಶದಲ್ಲಿ ಗಸ್ತು ತಿರುಗುವಾಗ ಅದನ್ನು ಸ್ಫೋಟಿಸಲಾಗಿದೆ. ಇದರಿಂದಾಗಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಸೇನೆಯ ಟ್ರಕ್ ಮೂಲಕ ಯೋಧರು ಕಾಡಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ ಎಂಬ ಮಾಹಿತಿಯು ನಕ್ಸಲರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ, ಅವರು ಐಇಡಿ ಇರಿಸಿದ್ದರು. ವಾಹನವು ತೆರಳುವಾಗಲೇ ಅದನ್ನು ಸ್ಫೋಟಿಸಿದ್ದಾರೆ. ದುರಂತದಲ್ಲಿ ಸಿಆರ್ಪಿಎಫ್ ಪೇದೆ ಶೈಲೇಂದ್ರ (29) ಹಾಗೂ ಟ್ರಕ್ ಚಾಲಕ ವಿಷ್ಣು (35) ಎಂಬುವರು ಹುತಾತ್ಮರಾಗಿದ್ದಾರೆ.
ಸ್ಫೋಟದ ಬಳಿಕ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ನಕ್ಸಲರ ಹತ್ಯೆಗಾಗಿ ಕಾರ್ಯಾಚರಣೆ ಕೂಡ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

