ಶ್ರೀನಗರ: ಭಯೋತ್ಪಾದಕರ ವಿರುದ್ಧ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರನ್ನ ಹೊಡೆದುರುಳಿಸಲಾಗಿದೆ. ಇದೇ ವೇಳೆ ಇಬ್ಬರು ಭಾರತೀಯ ಸೈನಿಕರು ವೀರಮರಣ ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೊಡೆರ್ಗಾಮ್ ಹಾಗೂ ಫ್ರಿಸಲ್ ಚಿನ್ನಿಗಮ್ ಗ್ರಾಮದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶ ಮಾಡಿದರು. ಭದ್ರತಾ ಪಡೆಗಳು ಗ್ರಾಮಗಳನ್ನು ತಲುಪುತ್ತಿದ್ದಂತೆಯೇ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿಕೊಂಡು ಗುಂಡಿನ ದಾಳಿ ನಡೆಸಲು ಮುಂದಾದರು. ಇದೇ ವೇಳೆ ಮೊಡೆರ್ಗಾಮ್ ಗ್ರಾಮದಲ್ಲಿ ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಹುತಾತ್ಮರಾಗಿದ್ದಾರೆ.

ಭದ್ರತಾ ಪಡೆಗಳು 2ನೇ ಬಾರಿಗೆ ಗುಂಡಿನ ದಾಳಿ ನಡೆಸಿದ ವೇಳೆ ನಡೆದ ಎರಡು ಕಡೆಯ ಫೈರಿಂಗ್​ನಲ್ಲಿ 1ನೇ ರಾಷ್ಟ್ರೀಯ ರೈಫಲ್ಸ್‌ನ ಹವಾಲ್ದಾರ್ ಒಬ್ಬರು ಹುತಾತ್ಮರಾಗಿದ್ದಾರೆ.