ಲಕ್ನೋ: ಉತ್ತರಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಮರದ ದಿಮ್ಮಿ ಹಾಕಿ ಕೃತ್ಯವೆಸಗಲು ಮುಂದಾದ ರೈತ ಮುಖಂಡನ ಪುತ್ರ ಹಾಗೂ ಸ್ನೇಹಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೈಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿ ಹಳಿ ತಪ್ಪಿಸಲು ಯತ್ನಿಸಿದಾಗ ಲೋಕೋ ಪೈಲೆಟ್ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ದುರಂತವನ್ನು ಸಂಭವಿಸುವುದನ್ನು ತಪ್ಪಿಸಿದ್ದಾರೆ. ಇಪ್ಪತ್ತು ವರ್ಷದ ದೇವ್ ಸಿಂಗ್ ಹಾಗೂ ಫರೂಕಾಬಾದ್ ಅರಿಯಾರಾ ಗ್ರಾಮದ ಮೊಹನ್ ಕುಮಾರ್ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ದೇವ್ ಸಿಂಗ್ನ ತಂದೆ ಕಮಲೇಶ್ ರೈತ ಮುಖಂಡ.
ವಿಚಾರಣೆಯ ವೇಳೆ ತಮ್ಮ ಹೆಸರು ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ ಎಂಬ ಕಾರಣಕ್ಕಾಗಿ ಹೀಗೆ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ ಎಂದು ಕಾಯಮ್ ಗಂಜ್ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಭಾರತೀಯ ರೈಲ್ವೇ ಉದ್ಯೋಗಿ ಜಮೀರ್ ಅಹ್ಮದ್ ಖಾನ್ ಆಗಸ್ಟ್ 24 ರಂದು ದೂರು ನೀಡಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ (FIR) ದಾಖಲಿಸಿಕೊಂಡಿದ್ದರು.
ಅಪರಾಧ ಮಾಡಿರುವ ವ್ಯಕ್ತಿಗಳು ತನಿಖೆಯ ವೇಳೆ, ತಾವು ಶನಿವಾರ ರಾತ್ರಿ ಆ ಪ್ರದೇಶದಲ್ಲಿ ಯಾರು ಇಲ್ಲದ ಸಮಯದಲ್ಲಿ ಪಕ್ಕದಲ್ಲಿದ್ದ ಗದ್ದೆಯಿಂದ ಮರದ ದಿಮ್ಮಿಗಳನ್ನು ತಂದು 80 ಮೀಟರ್ ದೂರದಲ್ಲಿರುವು ರೈಲು ಹಳಿಗಳ ಮೇಲೆ ಹಾಕಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಆರೋಪಿ ಸಿಂಗ್ ಹಾಗೂ ಕುಮಾರ್ ರೈತರಾಗಿದ್ದು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 327 ಮತ್ತು ರೈಲ್ವೇ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

