ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದ ಗಂಗಾ ಬ್ಯಾರೇಜ್​ ಬಳಿ ತರಬೇತಿ ವಿಮಾನವೊಂದು ಪತನಗೊಂಡಿದ್ದು, ಕರ್ನಾಟಕ ಮೂಲದ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ರಘುವೀರ್ ಲಾಲ್ ದೃಢಪಡಿಸಿದ್ದಾರೆ.

ಕಾನ್ಪುರದ ನತ್ತಾ ಪುರ್ವಾ ಗ್ರಾಮದ ವ್ಯಾಪ್ತಿಯಲ್ಲಿರುವ ಗಂಗಾ ಬ್ಯಾರೇಜ್ ಬಳಿ ಈ ಅಪಘಾತ ಸಂಭವಿಸಿದ್ದು, ತರಬೇತುದಾರರಾಗಿರುವ ಗುಜರಾತ್​ ಮೂಲದ ಸಚಿನ್​ ಭಾಟಿಯಾ ಮತ್ತು ತರಬೇತಿ ಪಡೆಯುತ್ತಿದ್ದ ಕರ್ನಾಟಕದ ಅಭಿಷೇಕ್​ ಪೂಜಾರಿ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಪೊಲೀಸ್ ಆಯುಕ್ತ ರಘುವೀರ್ ಲಾಲ್, ಜೆಸಿಪಿ ಸಂಕಲ್ಪ್ ಶರ್ಮಾ ಮತ್ತು ಕೇಂದ್ರ ಡಿಸಿಪಿ ಅತುಲ್ ಶ್ರೀವಾಸ್ತವ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.

ಪೊಲೀಸ್ ಆಯುಕ್ತ ರಘುವೀರ್ ಲಾಲ್​ ಮಾತನಾಡಿ, ಇಂದು ಬೆಳಗ್ಗೆ ಸುಮಾರು 11.30ರ ಸುಮಾರಿಗೆ ವಿಮಾನ ಪತನಗೊಂಡಿರುವ ಸುದ್ದಿ ಲಭ್ಯವಾಯಿತು. ನಾಲ್ಕು ಆಸನಗಳ ವಿಮಾನ ಇದಾಗಿದ್ದು, ಇಬ್ಬರು ಸಿಬ್ಬಂದಿ ಗಾರ್ಗ್ ಏವಿಯೇಷನ್ ​​ಟ್ರೈನಿಂಗ್ ಸೆಂಟರ್​ನಿಂದ ಟೆಕ್ನಾಮ್ ವಿಮಾನದಲ್ಲಿ ಹಾರಾಟ ಆರಂಭಿಸಿದ್ದರು. ಇವರಿಬ್ಬರೂ ಒಟ್ಟಾರೆಯಾಗಿ 3,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ವಿಮಾನ ಪತನಕ್ಕೆ ಕಾರಣ ಏನು ಎಂಬ ಬಗ್ಗೆ ಹೆಚ್ಚಿನ ತಾಂತ್ರಿಕ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.