ಬೆಂಗಳೂರು: ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಜಮ್ಮು-ಕಾಶ್ಮೀರದಲ್ಲಿ ದುರ್ಮರಣ ಹೊಂದಿದ್ದಾರೆ. ತಂದ್ರ ದಾಸ್(67), ಮೊನಾಲಿಸಾ ದಾಸ್(41) ಸೇರಿದಂತೆ ಮೂವರ  ಮೃತಪಟ್ಟಿದ್ದಾರೆ. ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದು, ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ಕಾರು ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಚಾಲಕ ಹ್ಯಾಂಡ್​ ಬ್ರೇಕ್ ಹಾಕದೇ ಇಳಿದು ಹೋಗಿದ್ದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ಕಂದಕಕ್ಕೆ ಉರುಳಿಬಿದ್ದಿದೆ.

ಮೃತಪಟ್ಟ ಕುಟುಂಬ ಜಮ್ಮು-ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಆದ್ರೆ, ಮಾರ್ಗಮಧ್ಯೆ ಅಮರನಾಥ ಸಮೀಪದ ಝೋಜಿಲ್ ಪಾಸ್ ಬಳಿ ಬೇರೊಂದು ಕಾರು ರಸ್ತೆಯಲ್ಲಿ ಕೆಟ್ಟು ನಿಂತಿದೆ. ಅದನ್ನು ನೋಡಲು ಕುಟುಂಬವನ್ನು ಕರೆದುಕೊಂಡು ಹೋಗುತ್ತಿದ್ದ ಚಾಲಕ ಕಾರು ನಿಲ್ಲಿಸಿದ್ದಾನೆ. ಅಲ್ಲದೇ ಏನಾಗಿದೆ ಎಂದು ಕಾರು ಇಳಿದು ಹೋಗಿದ್ದಾರೆ. ಆದ್ರೆ, ಇಳಿದು ಹೋಗುವ ಮುನ್ನ ಕಾರಿನ ಹ್ಯಾಂಡ್​ ಬ್ರೇಕ್ ಹಾಕುವುದನ್ನು ಮರೆತಿದ್ದಾನೆ. ಇದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ರಸ್ತೆ ಪಕ್ಕದಲ್ಲಿದ್ದ ಪ್ರಪಾತಕ್ಕೆ ಬಿದ್ದಿದೆ.

ಇನ್ನು CRPF, ಜಮ್ಮು-ಕಾಶ್ಮೀರ ಪೊಲೀಸರು, ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ 9 ವರ್ಷ ಬಾಲಕಿ ಅದ್ರಿತಾ ದಾಸ್​ ಬದುಕುಳಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.