ದೆಹಲಿ: ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಗಳಿಗೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಹೆಚ್ಚಾಗಿದ್ದು, ಒಂದು ದಿನದ ಹಿಂದೆ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಈಗ ಅಂಥಹುದೇ ಘಟನೆಯೊಂದು ನಡೆದಿದೆ.

ದೆಹಲಿಯಿಂದ ಮುಂಬೈಗೆ ಹೊರಟಿದ್ದ ಆಕಾಶ ವಿಮಾನಕ್ಕೆ ಬಾಂಬ್​ ಬೆದರಿಕೆ ಬಂದಿದೆ. 186 ಪ್ರಯಾಣಿಕರಿದ್ದ ಆಕಾಶ ಏರ್ ದೆಹಲಿ-ಮುಂಬೈ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಅಹಮದಾಬಾದ್​ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

ಆಕಾಶ ಏರ್ ವಕ್ತಾರರ ಪ್ರಕಾರ ಬಾಂಬ್ ಬೆದರಿಕೆ ಬಂದ ನಂತರ ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.13 ಕ್ಕೆ ಸುರಕ್ಷಿತವಾಗಿ ಇಳಿದರು. ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಮತ್ತು ಪ್ರಸ್ತುತ ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ.