ಲಕ್ನೋ: ಅಯೋಧ್ಯೆಯಲ್ಲಿ ಧರ್ಮ ಧ್ವಜದ ಮರುಸ್ಥಾಪನೆಯು ರಾಜ್ಯದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನ.25ರಂದು ಅಯೋಧ್ಯೆಯಲ್ಲಿ ಅದ್ಧೂರಿ ಸಮಾರಂಭದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಲಾಗುವುದು. ಅಂದು ಶ್ರೀ ಅಯೋಧ್ಯಾ ಧಾಮದ ಹೆಸರನ್ನು ಇತಿಹಾಸದ ಪುಟಗಳಲ್ಲಿ ಮತ್ತೊಮೆ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗುತ್ತದೆ. ಪ್ರಧಾನಿ ಮಾರ್ಗದರ್ಶನದಲ್ಲಿ ಅಯೋಧ್ಯಾ ಧಾಮದಲ್ಲಿ ನಡೆಯುತ್ತಿರುವ ಕೆಲಸವು ಭಗವಾನ್‌ ರಾಮನ ಜೀವನ ಮೌಲ್ಯಗಳಿಂದ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

ಧರ್ಮಧ್ವಜದ ಮರುಸ್ಥಾಪನೆಯು ಅಯೋಧ್ಯೆಯನ್ನು ಜಾಗತಿಕ ಆಧ್ಯಾತಿಕ ಕೇಂದ್ರವಾಗಿ ಪರಿವರ್ತಿಸುತ್ತದೆ. ಭವ್ಯವಾದ ರಾಮಮಂದಿರದ ಪ್ರತಿಷ್ಠಾಪನೆಯ ನಂತರ ಈ ಆಚರಣೆಯು ಕೇವಲ ಯಜ್ಞದ (ತ್ಯಾಗ) ಪರಾಕಾಷ್ಠೆಯಲ್ಲ, ಆದರೆ ಹೊಸ ಯುಗದ ಆರಂಭವಾಗಿದೆ ಎಂದಿದ್ದಾರೆ.

ಅಯೋಧ್ಯೆ ವಿಷನ್‌ 2047 ಶೀಘ್ರವಾಗಿ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಹೇಳಿದ ಆದಿತ್ಯನಾಥ್‌, ಹೊಸ ಸಂಪರ್ಕ, ಅತ್ಯಾಧುನಿಕ ಮೂಲಸೌಕರ್ಯ, ಕ್ಷಿಪ್ರ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಾರ್ಟ್‌ ಸಿಟಿ ಮತ್ತು ಸೋಲಾರ್‌ ಸಿಟಿಯಂತಹ ಉಪಕ್ರಮಗಳು ಅಯೋಧ್ಯೆಯನ್ನು ಜಾಗತಿಕ ಮಟ್ಟದಲ್ಲಿ ಸುಸ್ಥಿರ, ಅಂತರ್ಗತ, ಆಧುನಿಕ ನಗರವಾಗಿ ಸ್ಥಾಪಿಸುತ್ತಿವೆ ಎಂದು ಹೇಳಿಕೊಂಡಿದ್ದಾರೆ.

ಲಕ್ಷಾಂತರ ಭಕ್ತರಿಗೆ, ಶ್ರೀ ಅಯೋಧ್ಯಾ ಧಾಮವನ್ನು ತಲುಪುವುದು ಹಿಂದೆಂದಿಗಿಂತಲೂ ಸುಲಭ, ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರವಾಗಿದೆ. ಭಗವಾನ್‌ ಶ್ರೀರಾಮ ನಗರವು ವಿಶ್ವ ಭೂಪಟದಲ್ಲಿ ಸಾಂಸ್ಕೃತಿಕ ರಾಜಧಾನಿಯಾಗಿ ಹೊರಹೊಮುತ್ತಿದೆ, ಅಲ್ಲಿ ಪರಂಪರೆಯನ್ನು ಗೌರವಿಸಲಾಗುತ್ತದೆ ಮತ್ತು ಅಭೂತಪೂರ್ವ ಅಭಿವೃದ್ಧಿ ನಡೆಯುತ್ತಿದೆ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.