ಉತ್ತರಪ್ರದೇಶ: ಹತ್ರಾಸ್ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ದುರಂತವೊಂದು ಸಂಭವಿಸಿದೆ. ಶಿವನ ಆರಾಧನೆ ಮಾಡಿ ವಾಪಸ್ ಆಗುತ್ತಿದ್ದವರ ಮೇಲೆ ಏಕಾಏಕಿ ಜವರಾಯನ ದರ್ಶನವಾಗಿ ಬಿಟ್ಟಿದೆ. ಮಕ್ಕಳು ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಉಸಿರಾಡಲಾಗದೇ ದಾರುಣವಾಗಿ ಸಾವನ್ನಪ್ಪಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಹೌದು. . ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಧಾರ್ಮಿಕ ಸಮಾರಂಭವನ್ನ ಆಯೋಜನೆ ಮಾಡಲಾಗಿತ್ತು. ಹತ್ರಾಸ್ನ ಭಾನ್ಪುರ್ ಎಂಬ ಗ್ರಾಮದಲ್ಲಿ ವಿಶಾಲವಾದ ಬಯಲಿನಲ್ಲಿ ಟೆಂಟ್ ಹಾಕಿ, ಶಿವನ ಆರಾಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜನಸಂದಣಿ ಉಂಟಾಗಿದೆ.
ಭೋಲೆ ಬಾಬಾ ಪ್ರವಚನ ನಡೆಯುತ್ತಿದ್ದ ಸಂದರ್ಭಲ್ಲಿ ಕಾಲ್ತುಳಿತ ಸಂಭವಿಸಿಬಿಟ್ಟಿದೆ. ಬಯಲಿನಲ್ಲಿ ಹಾಕಲಾಗಿದ್ದ ಟೆಂಟ್ನೊಳಗೆ ಗಾಳಿಯಾಡಲು ಸಣ್ಣ ರಂಧ್ರವೂ ಇರಲಿಲ್ಲ. ಇದರ ಪರಿಣಾಮ ಟೆಂಟ್ನೊಳಗೆ ಜನ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿ ಆಮ್ಲಜನಕದ ಕೊರತೆಯುಂಟಾಗಿದ್ದು, ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ.
ದುರದೃಷ್ಟವಶಾತ್, ಅಲ್ಲಿ ಒಂದೇ ಒಂದು ಪ್ರವೇಶದ್ವಾರವಿತ್ತು. ಉಸಿರಾಟದ ತೊಂದರೆಯಿಂದಾಗಿ ಪ್ರವೇಶದ್ವಾರದ ಕಡೆಗೆ ಏಕಾಏಕಿ ಜನರು ಓಡಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 116ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ತನಿಖೆ ಮುಂದುವರೆದಿದೆ. ಈ ದುರಂತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.