ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಿರಂತರ ಉಗ್ರರ ದಾಳಿ ನಡೆಯುತ್ತಿದ್ದು, ಜುಲೈ ತಿಂಗಳಲ್ಲಿ ಬರೋಬ್ಬರಿ 13 ಉಗ್ರರನ್ನು ಹೊಡೆದುರುಳಿಸಲಾಗಿದ್ದು, 14 ಯೋಧರು ಹುತಾತ್ಮರಾಗಿದ್ದಾರೆ.

ಜುಲೈ ತಿಂಗಳಲ್ಲಿ, ಎಂಟು ಎನ್‌ಕೌಂಟರ್‌ಗಳು, ಭದ್ರತಾ ಪಡೆಗಳ ಮೇಲೆ ಕುಖ್ಯಾತ BAT ತಂಡದ ದಾಳಿ ಸೇರಿದಂತೆ ಮೂರು ದಾಳಿಗಳು ಮತ್ತು ಮೂರು ಒಳನುಸುಳುವಿಕೆ ಪ್ರಯತ್ನಗಳು ಜಮ್ಮು ಕಾಶ್ಮೀರದಲ್ಲಿ ನಡೆದಿವೆ.

ಜುಲೈನಲ್ಲಿ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಜುಲೈ ತಿಂಗಳಲ್ಲಿ ಎಂಟು ಗುಂಡಿನ ಚಕಮಕಿಗಳು ನಡೆದಿವೆ.

ಮೂರು ಗುಂಡಿನ ಚಕಮಕಿಗಳು ಕಣಿವೆಯಲ್ಲಿ ನಡೆದಿದ್ದರೆ ನಾಲ್ಕು ಜಮ್ಮು ಪ್ರದೇಶದಲ್ಲಿ ನಡೆದಿವೆ. ಅವುಗಳಲ್ಲಿ ಮೂರು ಪರ್ವತ ಪ್ರದೇಶವಾದ ದೋಡಾ ಜಿಲ್ಲೆಯಲ್ಲಿಯೇ ಈ ದಾಳಿ ನಡೆದಿದೆ.

ದೋಡಾ ಅರಣ್ಯ ಪ್ರದೇಶದಲ್ಲಿ ಸರಣಿ ಗುಂಡಿನ ಚಕಮಕಿಗಳ ನಂತರ, ಭದ್ರತಾ ಪಡೆಗಳು 2-3 ಗುಂಪುಗಳಾಗಿ ವಿಭಜಿಸಲ್ಪಟ್ಟು 10-12 ಉಗ್ರರ ಗುಂಪನ್ನು ಪತ್ತೆಹಚ್ಚಲು ದಟ್ಟ ಅರಣ್ಯ ಪ್ರದೇಶಗಳಲ್ಲಿ ಬೃಹತ್ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಜುಲೈ ತಿಂಗಳಲ್ಲಿ, ಮೂರು ಪ್ರಮುಖ ದಾಳಿಗಳು ನಡೆದವು. ಒಂದು ಕಥುವಾ ಜಿಲ್ಲೆಯ ಮಾದೇಶಿ ಅರಣ್ಯ ಪ್ರದೇಶದಲ್ಲಿ ಐದು ಸೈನಿಕರು ಹುತಾತ್ಮರಾದರು. ದೂರದ ರಜೌರಿ ಗ್ರಾಮದಲ್ಲಿರುವ ಶೌರ್ಯ ಚಕ್ರ ಪುರಸ್ಕೃತ ಪುರಷೋತ್ತಮ್ ಕುಮಾರ್ ಅವರ ಮನೆಯ ಮೇಲೆ ಮತ್ತೊಂದು ಉಗ್ರಗಾಮಿ ದಾಳಿ ನಡೆದಿತ್ತು.

ಉಗ್ರರ ದಾಳಿಯಲ್ಲಿ ಯೋಧ ಮತ್ತು ಗ್ರಾ.ಪಂ ಸದಸ್ಯನ ಸಂಬಂಧಿ ಗಾಯಗೊಂಡಿದ್ದಾರೆ. ಈ ವೇಳೆ ಸೇನೆ ಪ್ರತಿದಾಳಿ ನಡೆಸಿತ್ತಾದರೂ ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಕುಖ್ಯಾತ BAT ತಂಡವು ಉತ್ತರ ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರತೀಯ ಸೇನಾ ಪೋಸ್ಟ್ ಮೇಲೆ ಮೂರನೇ ದಾಳಿ ನಡೆಸಿತು.

BAT ತಂಡವು ಪಾಕಿಸ್ತಾನಿ ಕಮಾಂಡೋಗಳು ಮತ್ತು ಹೆಚ್ಚು ತರಬೇತಿ ಪಡೆದ ಉಗ್ರರನ್ನು ಒಳಗೊಂಡಿದೆ. ಬಿಎಟಿ ದಾಳಿಯಲ್ಲಿ ಓರ್ವ ಯೋಧ ಪಾಕಿಸ್ತಾನದ ಒಳನುಗ್ಗಿ ಹುತಾತ್ಮರಾಗಿದ್ದರು.