ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶುಕ್ರವಾರ ಮತ್ತಷ್ಟು ಬಿಗಡಾಯಿಸಿದ್ದು ಹಲವಾರು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ತತ್ತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆಯವರೆಗೂ ವರದಿಗಳ ಪ್ರಕಾರ ಕೊಪಿಲಿ, ಬರಾಕ್ ಮತ್ತು ಕುಶಿಯಾರಾ ಸೇರಿದಂತೆ ಹಲವು ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬಜಾಲಿ, ಬಕ್ಸಾ, ಬಾರ್ಪೇಟಾ, ಬಿಸ್ವನಾಥ್, ಕ್ಯಾಚರ್, ದರ್ರಾಂಗ್, ಗೋಲ್ಪಾರಾ, ಹೈಲಕಂಡಿ, ಹೋಜೈ, ಕಮ್ರೂಪ್, ಕರೀಮ್ಗಂಜ್, ಕೊಕ್ರಜಾರ್, ಲಖಿಂಪುರ, ನಾಗಾಂವ್, ನಲ್ಬರಿ, ಸೋನಿತ್ಪುರ್, ದಕ್ಷಿಣ ಸಲ್ಮಾರಾ, ತಮುಲ್ಪುರ್ ಮತ್ತು ಉದಲ್ಗುರಿ ಸೇರಿ 19 ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ತೊಂದರೆಗೀಡಾಗಿದ್ದಾರೆ.

