ದೆಹಲಿ: ಸಂಸದೆ ಸ್ವಾತಿ ಮಲಿವಾಲ್  ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್  ಅವರ ಸಹಾಯಕ ಬಿಭವ್ ಕುಮಾರ್​​ಗೆ  14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮೂರು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ನಂತರ ಕುಮಾರ್ ಅವರನ್ನು ದೆಹಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

14 ದಿನಗಳ ಪೊಲೀಸ್ ಕಸ್ಟಡಿಗೆ ಕೋರಿ ದೆಹಲಿ ಪೊಲೀಸರ ಅರ್ಜಿಯನ್ನು ಅವರ ವಕೀಲ ರಜತ್ ಭಾರದ್ವಾಜ್ ವಿರೋಧಿಸಿದರು.

“ನಾನು ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ.ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸಲು ನಾನು ಮನವಿ ಮಾಡಿದ್ದೆ. ನಾನೇ ಅದನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿದ್ದೇನೆ ಹಾಗಾಗಿ ನಾನು ಸಾಕ್ಷ್ಯವನ್ನು ಏಕೆ ಹಾಳು ಮಾಡುತ್ತೇನೆ ಎಂದು ಕುಮಾರ್ ಕೇಳಿದ್ದಾರೆ.

“ಎಲ್ಲಾ ಸಾಕ್ಷಿಗಳು ಸರ್ಕಾರಿ ನೌಕರರು ಮತ್ತು ನಾನು ಅವರನ್ನು ಪ್ರೇರೇಪಿಸುವ ಅಥವಾ ಬೆದರಿಕೆ ಹಾಕುವ ಯಾವುದೇ ಸ್ಥಿತಿಯಲ್ಲಿಲ್ಲ. ನಾನು ತನಿಖೆಗೆ ಸಹಕರಿಸಲು ಏಜೆನ್ಸಿಯ ಮುಂದೆ ಹಾಜರಾಗಲು ಬರುತ್ತೇನೆ. ನಾನು ಬೇರೆಲ್ಲಿಯೂ ಓಡಿಹೋಗುವುದಿಲ್ಲ” ಎಂದು ಅವರು ಹೇಳಿದರು.

ಮೇ 13 ರಂದು ಕೇಜ್ರಿವಾಲ್ ಅವರ ನಿವಾಸದಲ್ಲಿ ಬಿಭವ್ ಕುಮ್ಕ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಆರೋಪಿಸಿದ ನಂತರ ಮೇ 18ರಂದು ಕೇಜ್ರಿವಾಲ್ ಸಹಾಯಕನನ್ನು ಬಂಧಿಸಲಾಯಿತು.