ಮದುರೈ: ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇಗುಲಕ್ಕೆ ತೆರಳಿದ ತಮಗೆ, ಹಿಂದೂ ಎಂದು ಸಾಬೀತುಪಡಿಸುವ ಸಾಕ್ಷ್ಯವನ್ನು ದೇಗುಲದ ಸಿಬ್ಬಂದಿ ಕೇಳಿದರು ಹಾಗೂ ಈ ವೇಳೆ ಬಹಳ ಅಸಭ್ಯವಾಗಿ ನಡೆದುಕೊಂಡರು ಎಂದು ಖ್ಯಾತ ನಟಿ ನಮಿತಾ ಆರೋಪಿಸಿದ್ದಾರೆ.
‘ನಾನು ಹಿಂದೂ ಧರ್ಮೀಯಳು. ತಿರುಮಲದಲ್ಲಿ ಹಿಂದೂ ವ್ಯಕ್ತಿಯನ್ನು ಮದುವೆ ಆಗಿದ್ದೆ. ಶ್ರೀಕೃಷ್ಣ ಎಂಬ ಮಗನಿದ್ದಾನೆ. ಆದರೆ ನನಗೆ ಮೀನಾಕ್ಷಿ ದೇಗುಲಕ್ಕೆ ಬಂದಾಗ ಹಿಂದೂ ಎಂದು ಸಾಬೀತು ಮಾಡುವ ಸರ್ಟಿಫಿಕೇಟ್ ಕೊಡಿ ಎಂದು ಸಿಬ್ಬಂದಿ ಕೇಳಿದರು ಹಾಗೂ ಅಸಭ್ಯವಾಗಿ ವರ್ತಿಸಿ ದರ್ಶನದಿಂದ ತಡೆದರು. ನನ್ನ ಜೀವನದಲ್ಲಿ ಎಂದೂ ಇಂಥ ಸನ್ನಿವೇಶ ಎದುರಿಸಿರಲಿಲ್ಲ’ ಎಂದಿದ್ದಾರೆ. ‘ಆದರೆ ಕೊನೆಗೆ ಸ್ಪಷ್ಟನೆ ನೀಡಿದ ನಂತರ ಮತ್ತು ಹಣೆಗೆ ಕುಂಕುಮ ಹಚ್ಚಿಕೊಂಡ ನಂತರ ದರ್ಶನ ಮಾಡಲು ಬಿಟ್ಟರು’ ಎಂದು ನಟಿ ಹೇಳಿದ್ದಾರೆ

