ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ನಂತರ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.
ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು, ‘ವಿಚಾರಣೆಗೆ ನಿರಾಕರಿಸುತ್ತಿರುವುದು ಅರ್ಜಿಯಲ್ಲಿರುವ ಮನವಿಯ ಕಾರಣದಿಂದ ಅಲ್ಲ, ಸಂತ್ರಸ್ತ ವಿದ್ಯಾರ್ಥಿಗಳ ಬದಲಾಗಿ ವಕೀಲರು ಪಿಐಎಲ್ ಸಲ್ಲಿಸಿರುವುದರಿಂದ’ ಎಂದು ಹೇಳಿತು.
‘ನೀವು ಏಕೆ (ವಕೀಲರು) ಬಂದಿದ್ದೀರಿ? ವಿದ್ಯಾರ್ಥಿಗಳೇ ಬರಲಿ’ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.
‘ಕಾನೂನು ವಿಷಯಗಳ ಮೇಲೆ ಗಮನಹರಿಸಿ. ಇಂಥ ವಿಷಯಗಳನ್ನು ಸಂತ್ರಸ್ತರಿಗೆ ಬಿಡಿ’ ಎಂದು ಅರ್ಜಿದಾರರಾದ ವಕೀಲ ಉಜ್ವಲ್ ಗೌರ್ ಅವರಿಗೆ ನ್ಯಾಯಪೀಠವು ತಿಳಿಸಿತು.
ಕೇಂದ್ರ ಶಿಕ್ಷಣ ಸಚಿವಾಲಯವು ಜೂನ್ 19ರಂದು ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದು ಮಾಡಿ, ಪ್ರಕರಣದ ತನಿಖೆ ನಡೆಸುವ ಹೊಣೆಯನ್ನು ಸಿಬಿಐಗೆ ವಹಿಸಿದೆ.

