ಲಖನೌ: ಬಲವಂತವಾಗಿ ವ್ಯಕ್ತಿಯೊಬ್ಬರ ಮನೆ ತೆರವು ಮಾಡಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 14 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಎಂಟು ವರ್ಷಗಳ ಹಳೆಯ ಪ್ರಕರಣ ಇದಾಗಿದ್ದು, ಮನೆಯನ್ನು ಬಲವಂತವಾಗಿ ಖಾಲಿ ಮಾಡಿ ಮಾಲೀಕರನ್ನು ಥಳಿಸಿದ್ದಾರೆ. ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯವು ಮೊಹಮ್ಮದ್ ಅಜಂ ಖಾನ್ ಅವರನ್ನು ದೋಷಿ ಎಂದು ಬುಧವಾರ ತೀರ್ಪು ನೀಡಿತ್ತು.
ಜಿಲ್ಲಾ ಸರ್ಕಾರಿ ವಕೀಲರಾದ ಸೀಮಾ ಸಿಂಗ್ ರಾಣಾ ಮಾತನಾಡಿ, ಅಜಂ ಖಾನ್ ಅವರನ್ನು ನಿನ್ನೆ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಲಾಯಿತು. ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಿಸಲಾಗಿದೆ. ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಒಟ್ಟು 14 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ವಿಷಯವು ರಾಂಪುರದ ಡುಂಗರಪುರ ಬಸ್ತಿಗೆ ಸಂಬಂಧಿಸಿದ್ದಾಗಿದೆ. ದೂರುದಾರ ಅಬ್ರಾರ್ ಅವರು 2019 ರಲ್ಲಿ ಅಜಂ ಖಾನ್ ವಿರುದ್ಧ ದೂರು ನೀಡಿದ್ದರು. 2019 ರಲ್ಲಿ ಅವರ ಮನೆಗೆ ಬಲವಂತವಾಗಿ ಪ್ರವೇಶಿಸಿ, ಲೂಟಿ ಮಾಡಿದ್ದರು.
ಜೀವ ಬೆದರಿಕೆಗಳ ಹಾಕಿ ಬುಲ್ಡೋಜರ್ ಬಳಸಿ ಮನೆಯನ್ನು ನೆಲಸಮಗೊಳಿಸಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಪ್ರಕರಣದ ಎರಡನೇ ಅರೋಪಿ ಬರ್ಕತ್ ಅಲಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು 6 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂಬುದಾಗಿಯೂ ವಕೀಲರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಖಾನ್ ವಿರುದ್ಧ ಪಿತೂರಿಯ ಆರೋಪವಿದೆ. ಅಲಿ ಈ ದಂಡವನ್ನು ಪಾವತಿಸಲು ವಿಫಲವಾದರೆ, ಅವರು 18 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಲಿಗೆ ಸೆಕ್ಷನ್ 392 ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ., ಸೆಕ್ಷನ್ 452 ರ ಅಡಿಯಲ್ಲಿ ಆರು ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ಗಳ ದಂಡ, ಸೆಕ್ಷನ್ 504 ರ ಅಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗಿದೆ.
ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ಎಸ್ಪಿ ನಾಯಕ ಖಾನ್ ಪ್ರಸ್ತುತ ಸೀತಾಪುರ ಜೈಲಿನಲ್ಲಿದ್ದಾರೆ. 2022 ರಲ್ಲಿ, ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅವರು ಮೂರು ವರ್ಷಗಳ ಕಾಲ ಉತ್ತರ ಪ್ರದೇಶ ವಿಧಾನಸಭಾ ಸದಸ್ಯತ್ವ ಕಳೆದುಕೊಂಡಿದ್ದರು.