ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಮೋದಿ ಅವರು ಪರಿಶೀಲನಾ ಸಭೆ ನಡೆಸಿದ ಕಲವೇ ಗಂಟೆಗಳಲ್ಲಿ ರಿಯಾಸಿ ಬಸ್‌ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 50 ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದಿದ್ದಾರೆ.

1995 ಮತ್ತು 2005 ನಡುವೆ ರಿಯಾಸಿ ಜಿಲ್ಲೆಯ ಜಿಲ್ಲೆಯ ಅರ್ನಾಸ್ ಮತ್ತು ಮಹೋರ್ ಪ್ರದೇಶಗಳು ಉಗ್ರರಿಗೆ ಸುರಕ್ಷಿತ ತಾಣವಾಗಿತ್ತು. ಹೀಗಾಗಿ 50 ಮಂದಿಯನ್ನು ವಶ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಅರ್ನಾಸ್ ಮತ್ತು ಮಹೋರ್‌ನ ದೂರದ ಪ್ರದೇಶ ಒಳಗೊಂಡಂತೆ ಶೋಧ ಕಾರ್ಯಾಚರಣೆಗಳನ್ನು ವಿಸ್ತರಿಸಲಾಗಿದೆ ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ಭಾನುವಾರ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ 53 ಆಸನಗಳ ಬಸ್ ಶಿವ ಖೋರಿ ದೇವಸ್ಥಾನದಿಂದ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಬಸ್ದು ಕಮರಿಗೆ ಉರುಳಿ ಬಿದ್ದು 9 ಮಂದಿ ಸಾವನ್ನಪ್ಪಿದ್ದರು.