ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಬೃಹತ್ ಘೋಷಣೆ ಮಾಡಿದ್ದಾರೆ. ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ಗೆ ಇದು ಸ್ವೀಕಾರಾರ್ಹವಾಗಿದ್ದರೆ ಅವರೊಂದಿಗೆ ಮೈತ್ರಿಗೆ ನನ್ನ ಬೆಂಬಲವನ್ನು ನೀಡುವುದಾಗಿ ಹೇಳಿರುವ ಅವರು ಯಾವುದೇ ಸ್ಥಾನದಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಫ್ತಿ, ದೇವಸ್ಥಾನಗಳು, ಮಸೀದಿಗಳು ಮತ್ತು ಗುರುದ್ವಾರಗಳಿಗೆ ತಮ್ಮ ಪಕ್ಷವು ಉಚಿತ ವಿದ್ಯುತ್ ಅನ್ನು ಖಚಿತಪಡಿಸುತ್ತದೆ ಎಂದು ಅವರು ಭರವಸೆ ನೀಡಿದರು. ತಮ್ಮ ಪಕ್ಷವು ಗುತ್ತಿಗೆ ಶಿಕ್ಷಕರ ಗೌರವಧನವನ್ನು ಹೆಚ್ಚಿಸಲಿದೆ. ಇನ್ನು ಕಂಬಿಗಳ ಹಿಂದೆ ಇರುವವರಿಗೆ ಉಚಿತ ಕಾನೂನು ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು.
ಈ ಬಗ್ಗೆ ಮಾತನಾಡಿದ ಮುಫ್ತಿ ಅವರು, ನಾವು ಇಂದು ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ನಾವು ಯಾವಾಗಲೂ ಪರಿಹಾರ ಮತ್ತು ಸಮನ್ವಯಕ್ಕಾಗಿ ಕೆಲಸ ಮಾಡಿದ್ದೇವೆ. ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಈ ಸಮಯದಲ್ಲಿ ಈಗ ಕಾಶ್ಮೀರದ ಸಮಸ್ಯೆಯನ್ನು ಸೀಟು ಹಂಚಿಕೆಗೆ ಬಳಸಲಾಗುತ್ತಿದೆ ಎಂದಿದ್ದಾರೆ.

