ಡೆಹ್ರಾಡೂನ್‌: ದುರಸ್ತಿಗಾಗಿ ಎತ್ತಿಕೊಂಡು ಸಾಗುತ್ತಿದ್ದಾಗ ಖಾಸಗಿ ಹೆಲಿಕಾಪ್ಟರ್‌ ಪತನಗೊಂಡ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಿದೆ.

ಈ ಹಿಂದೆ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್ ಅನ್ನು ವಾಯುಸೇನೆಯ MI-17 ಹೆಲಿಕಾಪ್ಟರ್‌ ಎತ್ತಿಕೊಂಡು ಸಾಗುತ್ತಿತ್ತು. ಈ ವೇಳೆ ಹೆಲಿಕಾಪ್ಟರ್‌ ಜಾರಿ ಬಿದ್ದು ಮಂದಾಕಿನಿ ನದಿಯ ಬಳಿ ಪತನಗೊಂಡಿದೆ. ಅಪಘಾತದಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣ ತಿಳಿದು ಬಂದಿಲ್ಲ.

ಹೆಲಿಕಾಪ್ಟರ್‌ ಪತನಗೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಾರೀ ಮಳೆಯಿಂದಾಗಿ ಖಾಸಗಿ ಕಂಪನಿ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್‌ ಹಾಳಾಗಿತ್ತು. ಈ ಹೆಲಿಕಾಪ್ಟರ್‌ ಅನ್ನು ದುರಸ್ತಿಗಾಗಿ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಏರ್‌ ಲಿಫ್ಟ್‌ ಮಾಡಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆಗಸ್ಟ್‌ನಲ್ಲಿ ಚಾರಣ ಮಾರ್ಗವನ್ನು ಹೆಚ್ಚಾಗಿ ಸ್ಥಗಿತಗೊಳಿಸಲಾಗಿದ್ದರೂ, ಯಾತ್ರಾರ್ಥಿಗಳು ಹೆಲಿಕಾಪ್ಟರ್‌ಗಳಲ್ಲಿ ಹಿಮಾಲಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.