ನವದೆಹಲಿ: ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ದಿನವೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಕೇವಲ ಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ. ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖರ್ಗೆ, ತಮ್ಮ ಚುನಾವಣಾ ಭಾಷಣದಲ್ಲಿ 431 ಬಾರಿ ಅವರು ಮಂದಿರ – ಮಸೀದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಳೆದ 15 ದಿನಗಳ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ 232 ಬಾರಿ ಉಲ್ಲೇಖಿಸಿದ್ದಾರೆ. 573 ಬಾರಿ ಇಂಡಿಯಾ ಮೈತ್ರಿಕೂಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಪ್ರತಿಪಕ್ಷಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, ಜನರ ಸಮಸ್ಯೆಗಳ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಚುನಾವಣೆಗೂ ಮುನ್ನವೇ ನಮ್ಮ ಪಕ್ಷದ ಬ್ಯಾಂಕ್ ಖಾತೆ ಬಂದ್ ಮಾಡಿದರು. ಈ ಹಿಂದೆ ಯಾವ ಸರ್ಕಾರವೂ ಈ ರೀತಿ ಮಾಡಿರಲಿಲ್ಲ. ವಿರೋಧ ಪಕ್ಷಗಳನ್ನು ಹೀಗೆ ನಡೆಸಿಕೊಂಡಿರಲಿಲ್ಲ ಎಂದು ಕಿಡಿಕಾರಿದರು.
ಸಂವಿಧಾನ ಉಳಿಸಲು ಜನರೇ ಚುನಾವಣೆ ಮಾಡಿದ್ದಾರೆ. ಬಿಜೆಪಿಯ ವಿಭಜನಕಾರಿ ಪ್ರಚಾರವನ್ನು ಜನರು ಒಪ್ಪಿಲ್ಲ. ನಾವು ಜನರ ವಿಷಯಗಳ ಕುರಿತು ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಇಂಡಿಯಾ ಒಕ್ಕೂಟದ ನಾಯಕರಿಗೂ ಧನ್ಯವಾದ ತಿಳಿಸುತ್ತೇವೆ ಎಂದರು.
ಮೋದಿ ತನ್ನನ್ನು ತಾನು ದೇವರು ಎಂದು ಹೇಳಿಕೊಂಡಿದ್ದಾರೆ. ಜೂನ್ 4ರಂದು ಜನರು ಹೊಸ ಸರ್ಕಾರವನ್ನು ಚುನಾಯಿಸಲಿದ್ದಾರೆ. ಇಂಡಿಯಾ ಒಕ್ಕೂಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಎಲ್ಲರನ್ನು ಒಳಗೊಳ್ಳುವ ಸರ್ಕಾರ ಮಾಡಲಿದ್ದೇವೆ ಎಂದು ತಿಳಿಸಿದರು.