ನ್ಯೂಯಾರ್ಕ್‌: ರಾಜಕೀಯವು ಸ್ವಾರ್ಥದಿಂದ ಚಾಲಿತವಾಗಿರುವ ಆಟವಾಗಿ ಬದಲಾಗಿದೆ. ನಾನು ಮತ್ತು ನನ್ನದು ಎಂಬ ಮನೋಭಾವ ಮಾತ್ರ ಇದ್ದಾಗ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ನ್ಯೂಯಾರ್ಕ್‌ನಲ್ಲಿ ಶನಿವಾರ ನಡೆದ ‘ಒನ್ ವರ್ಲ್ಡ್, ಒನ್ ಹ್ಯೂಮ್ಯಾನಿಟಿ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಭಾರತದ ಸಾಂಪ್ರದಾಯಿಕ ತತ್ವ ಮತ್ತು ಸಂವಿಧಾನ ಎರಡೂ ಏಕತೆಯ ಆಶಯ ಹೊಂದಿವೆ. ಆದ್ರೆ ತಳಮಟ್ಟದಲ್ಲಿ ಈ ಸಂವಿಧಾನಿಕ ದೃಷ್ಟಿಕೋನ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ನಾನು ಮತ್ತು ನನ್ನದು ಎಂಬ ಮನೋಭಾವ ಮಾತ್ರ ಇದ್ದಾಗ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.

ಸಮಾಜದಲ್ಲಿ ಬದಲಾವಣೆ ಮೊದಲು ವ್ಯಕ್ತಿಯಿಂದಲೇ ಆರಂಭವಾಗಬೇಕು. ವೈಯಕ್ತಿಕ ಹಾಗೂ ರಾಜಕೀಯ ಹಿತಾಸಕ್ತಿಗಳಿಗಿಂತ ಸಾಮೂಹಿಕ ಒಳಿತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಭಾರತದಲ್ಲಿ ವಿವಿಧ ಧರ್ಮ ಹಾಗೂ ಪಂಥಗಳಿಗೆ ಸೇರಿದ ಜನರು ಸಾಂಪ್ರದಾಯಿಕವಾಗಿ ಒಟ್ಟಾಗಿ ಬದುಕಿದ್ದಾರೆ. ಭಾರತದಲ್ಲಿ ಎಲ್ಲ ಧರ್ಮಗಳ ಜನರು ಒಟ್ಟಾಗಿ ಬದುಕುತ್ತಿದ್ದಾರೆ. ಏಕೆಂದರೆ ಭಾರತವು ಸಾಂಪ್ರದಾಯಿಕವಾಗಿ ಎಲ್ಲರಿಗೂ ಆಶ್ರಯ ನೀಡಿದೆ. ಆದ್ರೆ ಮಾನವರ ನಡುವಿನ ಭಿನ್ನತೆಗಳು ಅಂತಿಮವಾಗಿ ಮಾಯವಾಗುವ ಭ್ರಮೆ ಮಾತ್ರ ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಚಾರ ಅದ್ವೈತ ತತ್ವಶಾಸ್ತ್ರದ ‘ಅದ್ವೈತ’ ಅಥವಾ ದ್ವೈತವಿಲ್ಲದ ಏಕತೆಯ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ನಾವೆಲ್ಲರೂ ಒಂದೇ ಎಂದು ಹೇಳಿದಾಗ ನಮ್ಮ ನಡುವಿನ ಭಿನ್ನತೆಗಳು ಮಾಯವಾಗುತ್ತವೆ. ಹಾಗಾಗಿ ಈ ಏಕತೆಯ ಅರಿವು ಮಾನವರ ನಡೆ-ನುಡಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.