ಜಮ್ಮು ಕಾಶ್ಮೀರ: ಪಹಲ್ಗಾಮ್ ಬಳಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ದಾಳಿಕೋರರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಪಾಯಿಂಟ್‌ ಬ್ಲ್ಯಾಂಕ್‌ ರೇಂಜ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಘಟನೆಯಲ್ಲಿ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಸಾವು ಕಂಡಿದ್ದಾರೆ. ಮಂಜುನಾಥ್‌ ರಾವ್‌ ಅವರ ತಲೆಗೆ ನೇರವಾಗಿ ಗುಂಡು ಹಾರಿಸಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿ ವರದಿಯ ಪ್ರಕಾರ ಕನಿಷ್ಠ 5 ಮಂದಿ ಸಾವು ಕಂಡಿರಬಹುದು ಎನ್ನಲಾಗಿದೆ. ನ್ನು 20ಕ್ಕೂ ಅಧಿಕ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ

ಪಹಲ್ಗಾಮ್‌ ಬಳಿ ರಸ್ತೆಯಲ್ಲಿ ಬೇಲ್‌ಪುರಿ ತಿನ್ನುತ್ತಿರುವಾಗ ಸೇನಾ ಸಮವಸ್ತ್ರದಲ್ಲಿ ಬಂದಿದ್ದ ಉಗ್ರರು ಮೊದಲಿಗೆ ಹೆಸರು ಹಾಗೂ ಯಾವ ಧರ್ಮ ಎಂದು ಕೇಳಿದ್ದಾರೆ. ಮುಸ್ಲಿಮರು ಅಲ್ಲ ಎಂದು ಗೊತ್ತಾದ ಬಳಿಕ ತಲೆಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ನನ್ನ ಹಾಗೂ ನನ್ನ ಮಗನನ್ನೂ ಕೊಲ್ಲಿ ಎಂದು ಉಗ್ರರ ಎದುರು ನಾನು ಕಣ್ಣೀರಿಟ್ಟೆ. ಆದರೆ, ನೀನು ಹೆಂಗಸು ನಿನ್ನನ್ನು ಕೊಲ್ಲೋದಿಲ್ಲ. ಇದನ್ನ ನೀನು ಮೋದಿಗೆ ಹೋಗಿ ತಿಳಿಸು ಎಂದು ಆತ ಹೇಳಿದ್ದ ಎಂದು ಮತ ಮಂಜುನಾಥ್‌ ರಾವ್‌ ಅವರ ಪತ್ನಿ ಪಲ್ಲವಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.