ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿಲ್ಲ. ಹೀಗಾಗಿ, ಕೇಂದ್ರದಲ್ಲಿ ಸರ್ಕಾರ ರಚಿಸಬೇಕಾದರೆ ಬಿಜೆಪಿಗೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅಥವಾ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಬೆಂಬಲ ಬೇಕಾಗಿದೆ.
ಬಿಜೆಪಿ ಬಹುಮತದ ಮಾರ್ಕ್ 272 ಅನ್ನು ತಲುಪಲು ವಿಫಲವಾದ ನಂತರ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಪಾಲುದಾರರ ಅಗತ್ಯವಿದೆ. ನಿತೀಶ್ ಅವರ ಜೆಡಿಯು ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನ ಗೆದ್ದಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ 12 ಸ್ಥಾನಗಳನ್ನು ಗೆದ್ದಿದೆ.
ಲೋಕಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 5 ರಂದು ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿ (ಯು) ಮತ್ತು ಟಿಡಿಪಿ ಎರಡೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಭಾಗವಾಗಿದೆ. ಆದರೆ ಇಂಡಿಯ ಬಣದವರು ಈ ಎರಡೂ ಪಕ್ಷದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿಗೆ ಅಧಿಕಾರಕ್ಕೇರುವುದು ಕಷ್ಟವಾಗುತ್ತದೆ. ಒಂದುವೇಳೆ ಟಿಡಿಪಿ ಮತ್ತು ಜೆಡಿಯು ತಮ್ಮ 27 ಸ್ಥಾನಗಳೊಂದಿಗೆ ಇಂಡಿಯ ಬ್ಲಾಕ್ಗೆ ಬೆಂಬಲ ಘೋಷಿಸಿದರೆ ಇಂಡಿಯ ಬಣಕ್ಕೆ ಬಹುಮತ ಸಿಗುವ ಸಾಧ್ಯತೆಯಿದೆ.
ಇಂದು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಇಬ್ಬರೂ ನಾಯಕರು ಬುಧವಾರ ದೆಹಲಿಗೆ ತೆರಳಲಿದ್ದು, ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಿತೀಶ್ ಇಂದು ದೆಹಲಿಗೆ ಆಗಮಿಸಲಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ಕಚೇರಿ (ಸಿಎಂಒ) ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಬಿಹಾರದ ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಅವರು ನಿತೀಶ್ ಅವರನ್ನು ಭೇಟಿಯಾಗಲು ಮನೆಗೆ ತೆರಳಿದ್ದರು.