ಕಾಸರಗೋಡು: ನವವಧು ಪಾಣಲಂನ ಪತಿಯ ಮನೆಯಲ್ಲಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬದಿಯಡ್ಕ ಚೆರ್ಲಡ್ಕ ನಿವಾಸಿ ಫಾತಿಮತ್ ಸುಫೈದಾ(24) ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಪತಿಯ ಮನೆಯಲ್ಲಿ ಹಿಂಸೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಫಾತಿಮತ್ ಸುಫೈದಾ ಅವರ ಕುಟುಂಬದವರು ಆರೋಪಿಸಿದ್ದಾರೆ. ಪತಿ ಆದಿಲ್ ನನ್ನು ವಿದ್ಯಾನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಫಾತಿಮತ್ ಸುಫೈದಾ ಶನಿವಾರ ರಾತ್ರಿ(ಮೇ23) ಆ್ಯಸಿಡ್ ಸೇವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಕೌಟುಂಬಿಕ ಕಲಹದ ನಂತರ ಆಕೆಯ ಪತಿ ಮತ್ತು ಅತ್ತೆಯ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಪೊಲೀಸರು ಬಿಎನ್ಎಸ್ಎಸ್ ಸೆಕ್ಷನ್ 194 ರ ಅಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.
ಪತಿ ಮತ್ತು ಅತ್ತೆ ಚಿನ್ನಾಭರಣಗಳಿಗೆ ಬೇಡಿಕೆ ಇಟ್ಟು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ದೌರ್ಜನ್ಯ ತೀವ್ರಗೊಂಡಿದ್ದು, ಈ ಹಿಂದೆಯೂ ಸಹ ಆದಿಲ್ ಫಾತಿಮತ್ ಅವರ ಮೊಬೈಲ್ ಫೋನ್ ಅನ್ನು ಹಾನಿಗೊಳಿಸಿದ್ದ, ಇದರಿಂದಾಗಿ ಅವರು ತಮ್ಮ ಕುಟುಂಬಕ್ಕೆ ಅಥವಾ ಪೊಲೀಸರಿಗೆ ಈ ಹಿಂಸಾಚಾರದ ಬಗ್ಗೆ ತಿಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಎರಡು ತಿಂಗಳ ಮಗುವನ್ನು ಹೊಂದಿರುವ ದಂಪತಿಗಳು ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಬೇಕಿತ್ತು. ಸುಫೈದಾ ಅವರ ಪೋಷಕರು ಘಟನೆ ನಡೆದ ದಿನವೇ ಆಕೆಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಪತಿಯ ಮನೆಗೆ ಆಗಮಿಸಿದ್ದರು, ಇದು ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

