ನೇಪಾಳ: ನೇಪಾಳದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಭೂಕುಸಿತ ಉಂಟಾಗಿದ್ದು, ಎರಡು ಬಸ್ಗಳು ನದಿಗೆ ಬಿದ್ದಿದ್ದು 63 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಮದನ್-ಆಶೀರ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ, ಈ ವೇಳೆ ಎರಡು ಬಸ್ಗಳು ಅವಶೇಷಗಳಡಿ ಸಿಲುಕಿ ತ್ರಿಶೂಲಿ ನದಿಯಲ್ಲಿ ಕೊಚ್ಚಿ ಹೋಗಿವೆ.

ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದುಬಂದಿದೆ. ಚಿತ್ವಾನ್ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ ಮತ್ತು ಎಎನ್ಐಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೋಗಳೂ ಹೊರಬಿದ್ದಿವೆ. ಭೂಕುಸಿತದಿಂದ ರಸ್ತೆಯ ಮಧ್ಯದಲ್ಲಿಯೇ ಅವಶೇಷಗಳು ಶೇಖರಣೆಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಯಾಣಿಕರನ್ನು ಹುಡುಕಲು ಮತ್ತು ರಕ್ಷಿಸಲು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಮುಂಗಾರು ಆರಂಭವಾದಾಗಿನಿಂದ ನೇಪಾಳದಲ್ಲಿ 62 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 90 ಜನರು ಗಾಯಗೊಂಡಿದ್ದಾರೆ.

