ನವದೆಹಲಿ: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿರುವುದು ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ಅನ್ನದಾತರ ಜೀವನವನ್ನು ಸುಗಮವಾಗಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟ ಆಲಿಸದೇ ಸಾವಿಗೆ ಕಾರಣವಾಗುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ, ಕಾಂಗ್ರೆಸ್ ಸರ್ಕಾರ ರೈತರಿಗಿತ್ತ ವರದಾನವೇ ಎಂದು ಜೋಶಿ ಕಿಡಿ ಕಾರಿದ್ದಾರೆ. ರಾಜ್ಯದ ರೈತರು ಸೂಕ್ತ ಬೆಳೆವಿಮೆ ಕಾಣಲಿಲ್ಲ. ಸಮರ್ಪಕ ಬೆಳೆ ಪರಿಹಾರವನ್ನೂ ಕಾಣಲಿಲ್ಲ. ರೈತರ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ನೀಡಿದ್ದ ಮನವಿ ಪತ್ರವೇ ಕಸದ ಬುಟ್ಟಿಗೆ ಸೇರಿಸಿತು.

ಇಂಥ ರೈತ ವಿರೋಧಿ ಧೋರಣೆಯ ಕಾಂಗ್ರೆಸ್ ಆಡಳಿತದಲ್ಲಿ ರೈತರಿಗೆ ಉತ್ತಮ ಭವಿಷ್ಯವೇ ಇಲ್ಲವಾಗಿದೆ ಎಂದು ಪ್ರಲ್ಹಾದ ಜೋಶಿ “X” ಖಾತೆಯಲ್ಲಿ ಆತಂಕ ಹೊರ ಹಾಕಿದ್ದಾರೆ. ನಾವು ಬಡವರ ಪರ, ಪರಿಶಿಷ್ಟರ ಪರ, ರೈತರ ಪರ ಎಂದು ಪರಿಪರಿಯಾಗಿ ಕಂತೆಪುರಾಣ ಹೇಳುವ ಕಾಂಗ್ರೆಸ್ ನುಡಿದಂತೆ ನಡೆಯದು. ಮಾತು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಸಚಿವರು ಟೀಕಿಸಿದ್ದಾರೆ.

ರೈತರ ಮನವಿ ಪತ್ರವನ್ನು ಕಸದ ಬುಟ್ಟಿಗೆ ಎಸೆಯುವ ಇವರಿಗೆ ಅಧಿಕಾರದಲ್ಲಿ ಇರುವ ಅರ್ಹತೆಯೇ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಈ ಕೂಡಲೇ ಸಿಎಂ ರಾಜಿನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.