ನವದೆಹಲಿ: ಇಡೀ ದೇಶವೆ ಕುತೂಹಲದಿಂದ ಕಾಯುತ್ತಿದ್ದಲೋಕಸಭೆ ಚುನಾವಣೆ ಫಲಿತಾಂಶವು ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆತಿದೆ. ಈ ಸಂತಸದ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. “ದೇಶದ ಜನರೇ ಜನಾರ್ದನರು. ಅವರ ತೀರ್ಪನ್ನು ಸ್ವಾಗತಿಸುತ್ತ ಉತ್ತಮ ಆಡಳಿತ ನೀಡುವತ್ತ ಮುಂದೆ ಸಾಗೋಣ. ಮೂರನೇ ಅವಧಿಯಲ್ಲಿ ಹೊಸ ಅಧ್ಯಾಯ ಸೃಷ್ಟಿಸೋಣ” ಎಂದು ನರೇಂದ್ರ ಮೋದಿ ಹೇಳಿದರು.
“ದೇಶದಲ್ಲಿ ಎನ್ಡಿಎ ಸರ್ಕಾರವು ಎರಡು ಅವಧಿಗೆ ಆಡಳಿತ ನಡೆಸಿ, ಮೂರನೇ ಅವಧಿಗೆ ಆಡಳಿತ ನಡೆಸಲು ಸಜ್ಜಾಗಿದೆ. ದೇಶದೆಲ್ಲೆಡೆ ಎನ್ಡಿಎಗೆ ಜನರಿಂದ ಉತ್ತಮ ಸ್ಪಂದನೆ, ಬೆಂಬಲ ವ್ಯಕ್ತವಾಗಿದೆ. ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶದಲ್ಲಿ ನಮಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿಯ ಮುಖ್ಯಮಂತ್ರಿಯು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲೂ ಒಡಿಶಾದಲ್ಲಿ ಹೆಚ್ಚಿನ ಕ್ಷೇತ್ರಗಳು ಸಿಕ್ಕಿವೆ. ಕೇರಳದಲ್ಲೂ ಬಿಜೆಪಿ ಗೆಲುವು ಸಿಕ್ಕಿದೆ. ಕೇರಳದ ಕಾರ್ಯಕರ್ತರು ಬಲಿದಾನ ನೀಡಿದ್ದಾರೆ. ಪೀಳಿಗೆಗಳವರೆಗೆ ಅವರು ಜನರ ಸೇವೆ ಜತೆಗೆ ಸಂಘರ್ಷ ಎದುರಿಸಿದ್ದಾರೆ. ಪೀಳಿಗೆಗಳವರೆಗೆ ಇಂತಹ ಕ್ಷಣಕ್ಕಾಗಿ ಅವರು ಕಾಯುತ್ತಿದ್ದರು. ಈಗ ಅವರು ಕನಸು ನನಸಾಗಿದೆ” ಎಂದು ಹೇಳಿದರು.