ಮಹಾರಾಷ್ಟ್ರ : ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರದ ಕುಖ್ಯಾತ ರೌಡಿನೊಬ್ಬನನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್‌ ರ‍್ಯಾಲಿಯನ್ನು ಆಯೋಜಿಸಿದ್ದರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3:30 ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗಿದೆ.

ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು.

ವರದಿ ಪ್ರಕಾರ, ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟಾಂಕರ್ ಅವರನ್ನು ಈ ಹಿಂದೆ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಬಂಧಿಸಲಾಗಿತ್ತು ಮತ್ತು ಜೈಲಿಗೆ ಹಾಕಲಾಗಿತ್ತು.

ಒಂದು ವರ್ಷದ ಹಿಂದೆ ಎಂಪಿಡಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಂಭ್ರಮಾಚರಣೆಯ ರ‍್ಯಾಲಿಯಿಂದಾಗಿ ಪೊಲೀಸ್ ಕ್ರಮಕೈಗೊಂಡು ಈಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ ಎನ್ನಲಾಗಿದೆ.

ಅವರ ಆರು ಸಹಚರರನ್ನು ಗೋಪಾಲ್ ನಾಗೋರ್ಕರ್, ವೇದಾಂತ್ ಚಾಲ್ಡೆ, ಶಾನ್ ಮೈಕೆಲ್, ಜಾಯ್ ಮೈಕೆಲ್, ರಾಬಿನ್ಸನ್ ಬ್ಯಾಟಿಸ್, ವೈಭವ್ ಖಂಡ್ರೆ ಮತ್ತು ವಿಕಾಸ್ ನೇಪಾಳಿ ಎಂದು ಗುರುತಿಸಲಾಗಿದೆ.