ಚೆನ್ನೈ: ಮೆಟ್ರೋದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತೊಂಡಿಯಾರ್ ಪೇಟೆಯ ಭುವನೇಶ್ (24) ಬಂಧಿತ ಆರೋಪಿ. ಬಂಧಿತ ಆರೋಪಿಯಾಗಿರುವ ಭುವನೇಶ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು.
ಮೆಟ್ರೋ ರೈಲಿನಲ್ಲಿ ಗಾಂಜಾ, ಸಿಗರೇಟ್, ಮದ್ಯಪಾನ, ತಿಂಡಿ ತಿನ್ನುವುದನ್ನು ನಿಷೇಧಿಸಲಾಗಿದೆ. ಆದರೆ ತೊಂಡಿಯಾರ್ ಪೇಟೆಯ ಭುವನೇಶ್ ಮೆಟ್ರೋದಲ್ಲಿ ಸಾಕಷ್ಟು ಪ್ರಯಾಣಿಕರ ಮಧ್ಯೆ ಗಾಂಜಾ ಸೇವಿಸಿದ್ದಾನೆ.
ಆತ ಗಾಂಜಾ ಸೇವನೆ ಮಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ಎಐಎಡಿಎಂಕೆ ನಾಯಕ ಮತ್ತು ಮಾಜಿ ಸಚಿವ ಡಿ ಜಯಕುಮಾರ್ ಅವರು ವೈರಲ್ ಫೋಟೋದಲ್ಲಿ ಕಾಣಿಸಿಕೊಂಡ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತೆನಾಂಪೇಟೆ ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಆರೋಪಿಯ ಚಲನವಲನ ವೀಕ್ಷಿಸಿದ ಪೊಲೀಸರು ತೊಂಡಿಯಾರ್ಪೇಟೆಯಿಂದ ತೆನಾಂಪೇಟೆಗೆ ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಿಂದ ಗಮನಿಸಿದ್ದಾರೆ. ಚೆನ್ನೈ ಪೊಲೀಸರು ಆ ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಬಂಧಿತ ಆರೋಪಿಯಿಂದ 1.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ತೇನಾಂಪೇಟೆ ಇನ್ಸ್ಪೆಕ್ಟರ್ ಸೆಂಥಿಲ್ ಮುರುಗನ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

