ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹೆಚ್ಪಿಸಿಎಲ್ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸುಮಾರು 3,000 ಎಲ್ಪಿಜಿ ಸಿಲಿಂಡರ್ಗಳು ಪಾತಳಗಂಗಾ ನದಿಗೆ ಕೊಚ್ಚಿಕೊಂಡು ಹೋಗಿವೆ.
ಕಳೆದೆರಡು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಪಾತಾಳಗಂಗಾ ನದಿ ಉಕ್ಕಿ ಹರಿದಿದೆ. ಪನ್ವೇಲ್ ತಾಲ್ಲೂಕಿನ ಚವಾನೆಯಲ್ಲಿರುವ ಹೆಚ್ಪಿಸಿಎಲ್ ಬಾಟ್ಲಿಂಗ್ ಪ್ಲಾಂಟ್ಗೆ ಪ್ರವಾಹದ ನೀರು ನುಗ್ಗಿದ್ದು, ಆವರಣದ ಗೋಡೆ ಕುಸಿದು ಬಿದ್ದಿದೆ. ಅಲ್ಲಿ ಸಂಗ್ರಹಿಸಿಟ್ಟಿದ್ದ ಸಿಲಿಂಡರ್ಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.
ನದಿಯಲ್ಲಿ ಸಿಲಿಂಡರ್ಗಳು ತೇಲಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಸರ್ಕಾರವು ಮುನ್ನೆಚ್ಚರಿಕೆ ಕ್ರಮಕ್ಕೆ ಆದೇಶಿಸಿದೆ.
‘ನದಿಯಲ್ಲಿ ಅಥವಾ ನದಿಯ ಹತ್ತಿರ ಕಂಡುಬರುವ ಯಾವುದೇ ಸಿಲಿಂಡರ್ ಅನ್ನು ಮುಟ್ಟುವುದಾಗಲಿ, ಸಂಗ್ರಹಿಸಿಡುವುದಾಗಲಿ ಅಥವಾ ಬಳಸುವುದಾಗಲಿ ಮಾಡಬಾರದು’ ಎಂದು ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಸೂಚನೆ ನೀಡಿದ್ದಾರೆ.
‘ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಸಿಲಿಂಡರ್ಗಳು ಸುರಕ್ಷಿತ ಸ್ಥಿತಿಯಲ್ಲಿವೆಯೇ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಕುತೂಹಲದಿಂದ ಅಥವಾ ವೈಯಕ್ತಿಕ ಬಳಕೆಗಾಗಿ ಅವುಗಳನ್ನು ಎತ್ತಿಕೊಂಡು ಮನೆಗೆ ಕೊಂಡೊಯ್ಯುವುದು ಅತ್ಯಂತ ಅಪಾಯಕಾರಿಯಾಗಬಹುದು. ನಾಗರಿಕರು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಸಿಕೊಳ್ಳಬಾರದು’ ಎಂದು ಹೇಳಿದ್ದಾರೆ.
ಕೊಚ್ಚಿಕೊಂಡು ಹೋಗಿರುವ ಯಾವುದೇ ಸಿಲಿಂಡರ್ಗಳು ಕಂಡುಬಂದಲ್ಲಿ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆಡಳಿತ ಮಂಡಳಿಯು ಜನರಲ್ಲಿ ಮನವಿ ಮಾಡಿದೆ. ಪತ್ತೆಯಾದ ಸಿಲಿಂಡರ್ಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವ ಬದಲು ಹೆಚ್ಪಿಸಿಎಲ್, ಅಧಿಕೃತ ಎಲ್ಪಿಜಿ ವಿತರಕರು ಅಥವಾ ನಿಗದಿಪಡಿಸಿದ ಸರ್ಕಾರಿ ಕಚೇರಿಗಳಿಗೆ ಹಸ್ತಾಂತರಿಸುವಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ.
ಸಿಲಿಂಡರ್ಗಳನ್ನು ಪತ್ತೆಹಚ್ಚಲು ಮತ್ತು ಮರುಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಸುಮಾರು 1,000 ಸಿಲಿಂಡರ್ಗಳನ್ನು ಸಂಗ್ರಹಿಸಲಾಗಿದ್ದು, ಉಳಿದವುಗಳ ಪತ್ತೆ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

