ಮುಂಬಯಿ: ಉಡುಪಿ ಮೂಲತಃ ಪ್ರಸಿದ್ಧ ನಾಟಕ ನಿರ್ದೆಶಕ, ಸಾಂಸ್ಕೃತಿಕ ಸಂಘಟಕ ಹಾಗೂ ಸಾಹಿತ್ಯ ಸೇವಕ ಪ್ರಕಾಶ್ ರಾವ್ ಪಯ್ಯಾರ್ (63.) ಅವರು ಕಳೆದ ಬುಧವಾರ (5.15) ರಾತ್ರಿ ಮಂಗಳೂರುನಲ್ಲಿನ ತಮ್ಮ ಸ್ವನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪದವೀಧರರಾಗಿದ್ದು ಗಲ್ಫ್ ರಾಷ್ಟ್ರದ ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬಾಯಿಯ ಟ್ರೇಡೆಕ್ಸ್ ಸಂಸ್ಥೆಯಲ್ಲಿ ಬಹುಕಾಲ ಹಣಕಾಸು ವ್ಯವಸ್ಥಾಪಕರಾಗಿದ್ದು ಯುಎಇಯಲ್ಲಿ ನೆಲೆಯಾದ ಕವಿ, ನಾಟಕಕಾರ, ರಂಗ ನಿರ್ದೇಶಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಪ್ರಕಾಶ್ ಅವರು 10ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದರು.
2015ರಲ್ಲಿ ಅವರ ‘ಉರೇಟಾ ಕಣ್ಣುದ ಸಿರಿ’ ಎಂಬ ಕವನ ಸಂಕಲನವು ಬಿಡುಗಡೆಯಾಗಿ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಲವಾರು ದಶಕಗಳ ವೃತ್ತಿಜೀವನದಲ್ಲಿ ಅವರು ಪ್ರಮುಖ ಕನ್ನಡ ನಾಟಕಕಾರರ 35ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು.
1985ರಲ್ಲಿ ಮುಂಬಯಿಯಲ್ಲಿ ಅವರು ಧ್ವನಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಮುಂದಿನ ಮೂರು ದಶಕಗಳಲ್ಲಿ ಈ ಸಂಸ್ಥೆ ನೂರಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತು. 2000ರ ನಂತರ ಯುಎಇಯಲ್ಲಿ ಕನ್ನಡ ಮತ್ತು ತುಳು ಸಂಸ್ಕೃತಿಯ ಪ್ರಮುಖ ದೂತನಾಗಿ, ಅವರು ನೂರಾರು ಕಲಾವಿದರಿಗೆ ಉದ್ಯೋಗ ಹಾಗೂ ಕಲಾತ್ಮಕ ಅವಕಾಶಗಳನ್ನು ಒದಗಿಸಿದರು.
ತಮ್ಮ ದೀರ್ಘ ಮತ್ತು ಕೀರ್ತಿಯುತ ಜೀವನದಲ್ಲಿ ಪಯ್ಯಾರ್ ಅವರು ಅನೇಕ ಗೌರವಗಳನ್ನು ಪಡೆದಿದ್ದರು. ಅವುಗಳಲ್ಲಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ (2010), ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ (2015), ಕರ್ನಾಟಕ ಸಂಘ ಅಬುಧಾಬಿಯ ಡಾ| ದ.ರಾ. ಬೆಂದ್ರೆ ಪ್ರಶಸ್ತಿ (2014), ಕರ್ನಾಟಕ ಸಂಘ ಶಾರ್ಜಾದ ಮಯೂರ ಪ್ರಶಸ್ತಿ (2010) ಸೇರಿದಂತೆ ದೇಶ-ವಿದೇಶಗಳ ಹಲವು ಪ್ರಶಸ್ತಿಗಳು ಸೇರಿವೆ. ಮೃತರ ಅಂತಿಮಕ್ರಿಯೆಯು ಪೂರ್ವಾಹ್ನ ಮಂಗಳೂರಿನ ರುದ್ರಭೂಮಿಯಲ್ಲಿ ನೆರವೇರಿತು.

