ನವದೆಹಲಿ: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಡಿ.ಕೆ ಶಿವಕುಮಾರ್ ಪ್ರಸ್ತಾಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ಸರ್ಕಾರ ರಚನೆ ಮಾಡಿದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ರಾಮನಗರ ಜಿಲ್ಲೆ ಮಾಡಿದ್ದರ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ. ರಾಮನ ಹೆಸರಿರುವ ರಾಮನಗರಕ್ಕೆ ಅದರದೇ ಆದ ಇತಿಹಾಸ ಇದೆ. ಅಲ್ಲಿ ಯಾವ್ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ. ಭೂಮಿ ಲಪಾಟಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಗೊತ್ತಿದೆ. ಇದೆಲ್ಲ ಬಿಟ್ಟು ಅಭಿವೃದ್ಧಿ ಮಾಡುವುದು ಕಲಿಯಲಿ ಎಂದು ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ.

ಹೆಸರು ಬದಲಾವಣೆ ಮಾಡಿದರೆ ಏನು ಸಿಗುತ್ತೆ ಅವರು ಹೇಳಬೇಕು. ಹೆಸರು ಬದಲಾವಣೆ ಮಾಡಿದರೆ ಎಲ್ಲ ಸರ್ಕಾರಿ ದಾಖಲೆಗಳಿಗೆ ತೊಂದರೆಯಾಗಲಿದೆ. ಹೊಸ ಪ್ರಕ್ರಿಯೆ ಶುರುವಾಗಲಿದೆ. ರಾಮನಗರ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಬಂದಿರೋದು. ನೋಡೋಣ ಮುಂದೇನಾಗುತ್ತೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.