ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಬಹದ್ದೂರ್ಗಢದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕದ ಪ್ರತಿ ಗುಪ್ತಚರ ಘಟಕ ಮತ್ತು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ಜಂಟಿ ಕಾರ್ಯಾಚರಣೆ ನಡೆಸಿದವು.
ಗುಂಡಿನ ಚಕಮಕಿಯಲ್ಲಿ ಹರಿಯಾಣ ಪೊಲೀಸರು ಘೋಷಿಸಿದ ತಲಾ 1 ಲಕ್ಷ ರೂ. ಇನಾಮು ಹೊಂದಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಸದಸ್ಯರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ದೆಹಲಿ ಪೊಲೀಸ್ ಕಾನ್ಸ್ಟೆಬಲ್ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಸಾರ್ನ ಟಿಬ್ಬಾ ದನಾಶೇರ್ ನಿವಾಸಿ ಪ್ರವೇಶ್ ಮತ್ತು ಹಿಸಾರ್ ಜಿಲ್ಲೆಯ ಜಖೋಡ್ ಖೇರಾ ಗ್ರಾಮದ ನಿವಾಸಿ ಹಿಮಾಂಶು ಹತ್ಯೆಗೀಡಾದವರು. ಇಬ್ಬರು ಹರಿಯಾಣಕ್ಕೆ ಎಸ್ಕೇಪ್ ಆಗುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿಯ ನಂತರ ಈ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು ಲಾರೆನ್ಸ್ ಬಿಷ್ಣೋಯ್-ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್-ಅನಿಲ್ ಪಂಡಿತ್ ಸಂಘಟಿತ ಅಪರಾಧ ಜಾಲದೊಂದಿಗೆ ಸಂಬಂಧ ಹೊಂದಿದ್ದರು. ಬಹು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದರೆಂದು ಆರೋಪಿಸಲಾಗಿದೆ.
ಜೂ.11 ರಂದು ಹನ್ಸಿಯಲ್ಲಿ ಜಿಮ್ ಆಪರೇಟರ್ ಕಪಿಲ್ ಕೊನೆ ನಡೆದಿತ್ತು. ಆ ಪ್ರಕರಣದಲ್ಲಿ ಈ ಇಬ್ಬರೂ ಆರೋಪಿಗಳು ಬೇಕಾಗಿದ್ದರು. ಈ ಹತ್ಯೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಬಂಧಿಸಲು ಅನುಕೂಲವಾಗುವಂತೆ ಹರಿಯಾಣ ಪೊಲೀಸರು, ಇಬ್ಬರ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಿಸಿದ್ದರು.
ಆರೋಪಿಗಳ ಬಗ್ಗೆ ತನಿಖಾಧಿಕಾರಿಗಳಿಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕಿತ್ತು. ಶಂಕಿತರು ಶಸ್ತ್ರಸಜ್ಜಿತರಾಗಿದ್ದು, ಮತ್ತೊಂದು ಗಂಭೀರ ಅಪರಾಧ ಎಸಗುವ ಉದ್ದೇಶದಿಂದ ಬಹದ್ದೂರ್ಗಢ ಪ್ರದೇಶವನ್ನು ತಲುಪಿದ್ದಾರೆ. ಮಾಹಿತಿಯ ಮೇರೆಗೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಹರಿಯಾಣ ಎಸ್ಟಿಎಫ್ ತಂಡಗಳು ಜಂಟಿಯಾಗಿ ಆರೋಪಿಗಳನ್ನು ಪತ್ತೆಹಚ್ಚಿ ಸುತ್ತುವರಿದವು. ʼಆರೋಪಿಗಳನ್ನು ಶರಣಾಗುವಂತೆ ಕೇಳಲಾಯಿತು. ಆದರೆ, ಪೊಲೀಸ್ ತಂಡದ ಮೇಲೆಯೇ ಇಬ್ಬರೂ ಗುಂಡು ಹಾರಿಸಿದರು. ಅಧಿಕಾರಿಗಳು ಆತ್ಮರಕ್ಷಣೆಯ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಕೊನೆಗೆ ಇಬ್ಬರೂ ಹತ್ಯೆಯಾಗಿದ್ದಾರೆʼ ಎಂದು ಪೊಲೀಸರು ತಿಳಿಸಿದ್ದಾರೆ.

