ಮುಂಬೈ: ಪುಣೆ ಪೋರ್ಷೆ ಅಪಘಾತದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೊನೆಗೂ ಮೌನ ಮುರಿದಿದ್ದು, ಅಪಘಾತ ನಡೆದ ಮೊದಲ ದಿನದಿಂದ ಪುಣೆ ಪೊಲೀಸ್ ಆಯುಕ್ತರೊಂದಿಗೆ ಸಂಪರ್ಕದಲ್ಲಿದ್ದೇನೆ. ಎಲ್ಲ ಮಾಹಿತಿಯನ್ನೂ ನಾನು ಪಡೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ವ್ಯಕ್ತಿಯು ಎಷ್ಟೇ ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ ಕಾನೂನು ಎಲ್ಲರಿಗೂ ಸಮಾನವಾಗಿರುತ್ತದೆ. ತಪ್ಪು ಮಾಡಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ತಪ್ಪತಸ್ಥರ ವಿರುದ್ಧ ನಾನು ಕಠಿಣ ಕ್ರಮಕ್ಕೆ ಆದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಯಾವುದೇ ತಾರತಮ್ಯ ಮಾಡಬಾರದು ಎಂದು ನಾನು ಮೊದಲಿನಿಂದಲೂ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಾವಿಗೀಡಾದ ಇಬ್ಬರು ಕೂಡ ಯಾರೋ ಒಬ್ಬರ ಮಕ್ಕಳು. ಈ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರ ಹಿನ್ನೆಲೆಯನ್ನೂ ಪರಿಶೀಲಿಸಲಾಗುವುದು. ವೈದ್ಯರಾಗಲಿ ಅಥವಾ ಬೇರೆಯವರಾಗಲಿ ಯಾರನ್ನೂ ಬಿಡಬೇಡಿ ಎಂದು ಪೊಲೀಸ್ ಕಮಿಷನರ್‌ಗೆ ಖುದ್ದಾಗಿ ಹೇಳಿದ್ದೇನೆ ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.

ವರದಿಯ ಪ್ರಕಾರ, ಮಹಾರಾಷ್ಟ್ರ ಸಿಎಂ ವೈಯಕ್ತಿಕವಾಗಿ ಪುಣೆ ಪೊಲೀಸ್ ಕಮಿಷನರ್‌ಗೆ ವೈದ್ಯರು ಅಥವಾ ಬೇರೆಯವರೂ ಸೇರಿದಂತೆ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.