ನವದೆಹಲಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ ಸಂಭವಿಸಿದ ಹಿನ್ನೆಲೆ ಕೇದಾರನಾಥ ಯಾತ್ರೆಯನ್ನು ಗೌರಿಕುಂಡ್‌ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಎಸ್‌ಡಿಆರ್‌ಎಫ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಸಬ್-ಇನ್ಸ್‌ಪೆಕ್ಟರ್ ಆಶಿಶ್ ದಿಮ್ರಿ ನೇತೃತ್ವದ ಎಸ್‌ಡಿಆರ್‌ಎಫ್ ಸೋನ್‌ಪ್ರಯಾಗ್‌ನ ತಂಡವನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಿದರು. ಬಳಿಕ ಸಮಗ್ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಕಾರ್ಯಾಚರಣೆಯ ಸಮಯದಲ್ಲಿ, ಎಸ್‌ಡಿಆರ್‌ಎಫ್ ತಂಡ ನಿರ್ಬಂಧಿತ ಮಾರ್ಗದ ಹೊರಗೆ ಸಿಲುಕಿಕೊಂಡಿದ್ದ ಸುಮಾರು 100 ಯಾತ್ರಿಕರನ್ನು ರಕ್ಷಣೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಲೋಕೋಪಯೋಗಿ ಇಲಾಖೆಯ ಕಾರ್ಮಿಕರು ತೊಂದರೆಗೊಳಗಾದ ಯಾತ್ರಾರ್ಥಿಗಳ ಸಂಚಾರವನ್ನು ಪುನಃಸ್ಥಾಪಿಸಲು ಪರ್ಯಾಯ ಮಾರ್ಗವನ್ನು ರಚಿಸುತ್ತಿದ್ದಾರೆ. ಎಸ್‌ಡಿಆರ್‌ಎಫ್ ಕಟ್ಟೆಚ್ಚರ ವಹಿಸಿದ್ದು, ಈ ಪ್ರದೇಶದಲ್ಲಿ ಮೇಲ್ವಿಚಾರಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.