ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ರಾತ್ರಿ ಭಯಾನಕ ಘಟನೆ ನಡೆದಿದೆ. ರೈಲ್ವೆ ಟ್ರ್ಯಾಕ್ ಮೇಲೆ ಸಿಲಿಂಡರ್ ಒಂದನ್ನು ಇಡಲಾಗಿದ್ದು, ಅದಕ್ಕೆ ರೈಲು ಡಿಕ್ಕಿಯಾಗಿದೆ.
ಉತ್ತರ ಪ್ರದೇಶದ ಅನ್ವರ್ಗಂಜ್-ಕಾಸ್ಗಂಜ್ ರೈಲು ಮಾರ್ಗದ ಕಾಳಿಂದಿ ಎಕ್ಸ್ಪ್ರೆಸ್ ರೈಲು ರಾತ್ರಿ 8:30ರ ಸುಮಾರಿಗೆ ತೆರಳುತ್ತಿತ್ತು. ಈ ವೇಳೆ ಬರ್ರಾಜ್ಪುರ ಹಾಗೂ ಬಿಲ್ಹೌರ್ ನಡುವಿನ ರೈಲ್ವೆ ಟ್ರ್ಯಾಕ್ ಮೇಲೆ ತುಂಬಿರುವ ಎಲ್ಪಿಜಿ ಸಿಲಿಂಡರ್ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಭಾರೀ ಶಬ್ಧ ಬಂದ ಕಾರಣ ಲೊಕೊ ಪೈಲಟ್ ಅವರು ಟ್ರೈನ್ ನಿಲ್ಲಿಸಿ ಸುತ್ತ ಪರಿಶೀಲನೆ ಮಾಡಿದ್ದಾರೆ. ಅನ್ವರ್ಗಂಜ್ ನಿಲ್ದಾಣದ ರೈಲ್ವೆ ಸೂಪರಿಂಟೆಂಡೆಂಟ್, ಆರ್ಪಿಎಫ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲವು ಅನುಮಾನಸ್ಪದ ವಸ್ತುಗಳು ಕಂಡು ಬಂದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಸ್ಥಳದಲ್ಲಿ ಸಿಕ್ಕ ಎಲ್ಲ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ಜೊತೆ ವಿಧಿವಿಜ್ಞಾನ ತಂಡ ಕೈಜೋಡಿಸಿದೆ. ಇನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.
ಈ ಎಲ್ಲವನ್ನೂ ಗಮನಿಸಿದರೆ ದೊಡ್ಡ ಮಟ್ಟದಲ್ಲೇ ಸ್ಫೋಟದ ಸಂಚು ರೂಪಿಸಿದ್ದರು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಪ್ರಕರಣವನ್ನು ಪೊಲೀಸರು ಸೇರಿದಂತೆ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಆರೋಪಿಗಳನ್ನು ಶೀಘ್ರವೇ ಸೆರೆಹಿಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

