ನವದೆಹಲಿ: ಪ್ರಯಾಣಿಕರನ್ನು ವಿಮಾನದಲ್ಲಿ ಅಥವ ವಿಮಾನ ನಿಲ್ದಾಣದಲ್ಲಿ ದೀರ್ಘಾವಧಿ ಕಾಯುವಂತೆ ಮಾಡುವುದು ಉಚಿತವಲ್ಲ ಎಂದು ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧ್ಯಾ ಹೇಳಿದ್ದಾರೆ.

ʼನಿರ್ದಿಷ್ಟ ಸಮಯ ಮೀರಿ ಹಾರಾಟ ವಿಳಂಬವಾದರೆ ವಿಮಾನವನ್ನು ಕ್ಯಾನ್ಸಲ್‌ ಮಾಡಿ ಬೇರೆ ಸಮಯ ನಿಗದಿಪಡಿಸಿ ಪ್ರಯಾಣಿಕರ ತೊಂದರೆಯನ್ನು ತಪ್ಪಿಸಬೇಕುʼ ಎಂದು ಸಚಿವರು ಹೇಳಿದ್ದಾರೆ.

ಏರ್‌ ಇಂಡಿಯಾದ ವಿಮಾನವೊಂದು ೨೦ ತಾಸು ತಡವಾಗಿ ಹೊರಟ ಘಟನೆ ಬೆನ್ನಲ್ಲೇ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋ ಕಡೆ ಹಾರಬೇಕಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಹವಾನಿಯಂತ್ರಣ ವ್ಯವಸ್ಥೆಯೂ ಇಲ್ಲದೆ ಪ್ರಯಾಣಿಕರನ್ನು ವಿಮಾನದೊಳಗೆ ಕಾಯುವಂತೆ ಮಾಡಲಾಗಿತ್ತು. ಇದರಿಂದಾಗಿ ಹಲವರು ಅಸ್ವಸ್ಥರಾಗಿದ್ದರು.