ಪ್ರತಿ ವರ್ಷ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಯುವಕರಿಗೆ ಭಯೋತ್ಪಾದನೆ ಮತ್ತು ಇದರಿಂದಾಗುವ ಸಾವು ನೋವು ಮತ್ತು ಜೀವನದ ಮೇಲೆ ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ದಿನವು ಸಮಾಜ ವಿರೋಧಿ ಕೃತ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸುತ್ತದೆ.

ರಾಷ್ಟ್ರೀಯ ಸಾಮರಸ್ಯವನ್ನು ಉತ್ತೇಜಿಸುವುದು, ಭಯೋತ್ಪಾದನೆಯನ್ನು ತಗ್ಗಿಸುವುದು ಮತ್ತು ಎಲ್ಲಾ ಜಾತಿ, ಧರ್ಮ, ಲಿಂಗಗಳ ಜನರನ್ನು ಒಂದುಗೂಡಿಸುವುದು ಭಯೋತ್ಪಾದನಾ ವಿರೋಧಿ ದಿನದ ಮುಖ್ಯ ಉದ್ದೇಶವಾಗಿದೆ

ಮೇ 21ರಂದು ಈ ದಿನಾಚರಣೆ ಏಕೆ?
1991ರ ಮೇ 21ರಂದು ಭಾರತದ ಏಳನೇ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಅನಂತರ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನದ ಅಧಿಕೃತ ಘೋಷಣೆಯನ್ನು ಮಾಡಲಾಯಿತು. ಶ್ರೀಲಂಕಾದ ತಮಿಳು ಉಗ್ರರ ಸಂಚಿನಿಂದಾಗಿ ತಮಿಳುನಾಡಿನಲ್ಲಿ ರಾಜೀವ್‌ ಗಾಂಧಿ ಅವರು ಕೊಲ್ಲಲ್ಪಟ್ಟರು. ಬಳಿಕ ವಿ. ಪಿ. ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಮೇ 21 ಅನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ.