ನವದೆಹಲಿ: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಮಾಲ್ಡೀವ್ಸ್ ಸರ್ಕಾರ ಇಸ್ರೇಲ್ ಪಾಸ್ಪೋರ್ಟ್ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ.
ಇದಕ್ಕೆ ಇಸ್ರೇಲ್ ತಿರುಗೇಟು ನೀಡಿದ್ದು, ತನ್ನ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್ಗೆ ತೆರಳುವ ಬದಲು ಭಾರತಕ್ಕೆ ತೆರಳಿ ಎಂದು ಕರೆ ನೀಡಿದೆ.
ಭಾರತದ ವಿವಿಧ ಪ್ರವಾಸೋದ್ಯಮ ಸ್ಥಳಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಮಾಲ್ಡೀವ್ಸ್ ಇನ್ನು ಮುಂದೆ ಇಸ್ರೇಲಿಗರನ್ನು ಸ್ವಾಗತಿಸುವುದಿಲ್ಲ. ಹೀಗಾಗಿ ಇಸ್ರೇಲಿ ಪ್ರವಾಸಿಗರು, ಆತ್ಮೀಯವಾಗಿ ಸ್ವಾಗತಿಸುವ, ಅತ್ಯುತ್ತಮ ಆತಿಥ್ಯ ನೀಡುವ ಸುಂದರ ಮತ್ತು ಅದ್ಭುತ ಕಡಲ ತೀರಗಳಿರುವ ಭಾರತಕ್ಕೆ ಭೇಟಿ ನೀಡಿ.
ಲಕ್ಷ ದ್ವೀಪ, ಗೋವಾ, ಅಂಡಾಮಾನ್ & ನಿಕೋಬಾರ್ ಮತ್ತು ಕೇರಳದ ಸುಂದರ ಕಡಲ ತೀರಗಳನ್ನು ಸಂದರ್ಶಿಸಿ ಎಂದು ರಾಯಭಾರ ಕಚೇರಿ ಪ್ರವಾಸಿಗರಿಗೆ ಶಿಫಾರಸ್ಸು ಮಾಡಿದೆ.
ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್ನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.
ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಶುರುವಾದ ಕಾರಣ ಆಾಲ್ಲಿಗೆ ತೆರಳುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.

