ನವದೆಹಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಮನೆಯನ್ನು ನವೀಕರಿಸುವಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ಮೂವರು ಇಂಜಿನಿಯರ್ಗಳನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಅಮಾನತುಗೊಳಿಸಿದೆ.
ಮೂವರು ಇಂಜಿನಿಯರ್ಗಳಾದ ಪ್ರದೀಪ್ ಕುಮಾರ್ ಪರ್ಮಾರ್, ಅಭಿಷೇಕ್ ರಾಜ್ ಮತ್ತು ಅಶೋಕ್ ಕುಮಾರ್ ರಾಜ್ದೇವ್ ಅವರು ಕೇಜ್ರಿವಾಲ್ ಅವರ ಬಂಗಲೆಯನ್ನು ನವೀಕರಿಸುವಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅರವಿಂದ ಕೇಜ್ರಿವಾಲ್ ಅವರ ಸೂಚನೆಗಳ ಮೇರೆಗೆ ಬಂಗಲೆಯಲ್ಲಿ ಉನ್ನತ ಮಾರ್ಪಾಡುಗಳ ಹೆಸರಿನಲ್ಲಿ ನಿಯಮ ಉಲ್ಲಂಘನೆ ಮತ್ತು ವೆಚ್ಚವನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನಾಲ್ವರನ್ನು ಅಮಾನತು ಮಾಡಲಾಗಿದೆ. ಪರ್ಮಾರ್ ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ನಿಯೋಜನೆಗೊಂಡಿದ್ದಾರೆ, ರಾಜ್ ಪಶ್ಚಿಮ ಬಂಗಾಳದ ಖರಗ್ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಇಂಜಿನಿಯರ್ಗಳಿಗೆ ದೆಹಲಿ ಲೋಕೋಪಯೋಗಿ ಇಲಾಖೆ ಸಚಿವರು ಕೈಜೋಡಿಸಿದ್ದು, ಮತ್ತು ಸಿಎಂ ಬಂಗಲೆ ತುರ್ತಾಗಿ ನವೀಕರಣಗೊಳಿಸುವ ಅವಶ್ಯಕತೆ ಇದೆ ಎಂದು ಈ ಕಾರ್ಯಕ್ಕೆ ಕೈ ಹಾಕಿದ್ದರು. ಆದರೆ ಇಡೀ ದೇಶವೇ ಕೋವಿಡ್ ಎದುರಿಸುತ್ತಿದ್ದ ಸಂದರ್ಭದಲ್ಲಿ ಅಂತಹ ಯಾವುದೇ ಅವಶ್ಯಕತೆ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ಇಲಾಖೆಯು ಹಣಕಾಸಿನ ನಿರ್ವಹಣೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಕುರಿತು ಆದೇಶಗಳನ್ನು ನೀಡುತ್ತಿರುವಾಗ, PWD ಸಚಿವರು ಹೊಸ ಬಂಗಲೆ ನಿರ್ಮಾಣದ ಪ್ರಸ್ತಾವನೆಯನ್ನು ಇಟ್ಟಿದ್ದರು ಎನ್ನಲಾಗಿದೆ.
ಪಿಡಬ್ಲ್ಯುಡಿ ಸಚಿವರ ನಿರ್ದೇಶನದ ಮೇರೆಗೆ ಹಳೆಯ ಕಟ್ಟಡವನ್ನು ಕೆಡವಿ ಹೊಸದನ್ನು ನಿರ್ಮಿಸುವುದು ಮತ್ತು ಅದರ ವೆಚ್ಚ ಹೆಚ್ಚಳ ಮಾಡಲಾಗಿದೆ. ಹೆಚ್ಚುವರಿ ಕಲಾತ್ಮಕ ಮತ್ತು ಅಲಂಕಾರಿಕ ಕೆಲಸಗಳು, ಅತ್ಯುತ್ತಮ ಗುಣಮಟ್ಟದ ಕಲ್ಲಿನ ನೆಲಹಾಸುಗಳು, ಉನ್ನತ ಮರದ ಬಾಗಿಲುಗಳು ಮತ್ತು ಸ್ವಯಂಚಾಲಿತ ಜಾರುವ ಗಾಜಿನ ಬಾಗಿಲುಗಳು ಮುಂತಾದ ಬದಲಾವಣೆಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಈ ಪ್ರಕರಣವನ್ನು ಈಗಾಗಲೇ ಕೇಂದ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ.

