ನವದೆಹಲಿ: ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಚಾಟೀ ಬೀಸಿದೆ. ಗರಿಷ್ಠ 15 ನಿಮಿಷಗಳ ವಿಳಂಬವನ್ನು ಕ್ಷಮಿಸಲು ನಿರ್ಧರಿಸಿದ್ದು, ದೇಶಾದ್ಯಂತ ಕೇಂದ್ರ ಸರ್ಕಾರದ ಉದ್ಯೋಗಿಗಳು ಬೆಳಗ್ಗೆ 9.15ಕ್ಕೆ ಕಚೇರಿಗೆ ಹಾಜರಾಗಿ, ಹಾಜರಾತಿಯನ್ನು ದಾಖಲಿಸಲು ಸುತ್ತೊಲೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆ ವರೆಗೆ ತೆರೆದಿರುತ್ತವೆ. ಆದರೆ ಕಿರಿಯ ಹಂತದ ಉದ್ಯೋಗಿಗಳು ತಡವಾಗಿ ಬರುವುದು ಮತ್ತು ಬೇಗನೆ ಹೊರಡುವುದು ಸಹಜವಾಗಿದೆ. ಇದರಿಂದ ಸಾರ್ವಜನಿಕ ಕೆಲಸಗಳು ಸೇರಿದಂತೆ, ಜನರಿಗೆ ಅನಾನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಲಾಗಿದೆ.
ಕೊವೀಡ್ ಬಳಿಕ ಕೇಂದ್ರ ಸರ್ಕಾರದ ನೌಕರರು ಬಯೋಮೆಟ್ರಿಕ್ ಬಳಕೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಹಿರಿಯ ಅಧಿಕಾರಿಗಳು ಸಹಿತ ಎಲ್ಲರೂ ಬಯೋ ಮೆಟ್ರಿಕ್ ಮೂಲಕವೇ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಿದೆ. ಬೆಳಗ್ಗೆ 9.15 ರೊಳಗೆ ಬಾರದಿದ್ದಲ್ಲಿ ಅರ್ಧ ದಿನದ ವೇತನ ಕಡಿತಗೊಳಿಸಲಾಗುವುದು ಎಂದು ಸಹ ಎಚ್ಚರಿಕೆ ನೀಡಿದೆ.

