ನವದೆಹಲಿ: ಧಾರಾಕಾರ ಮಳೆಯ ಪರಿಣಾಮವಾಗಿ ದೆಹಲಿಗೆ ಹೊರಡಬೇಕಿದ್ದ 8 ವಿಮಾನಗಳು ಜೈಪುರದತ್ತ ಹಾಗೂ ಎರಡು ವಿಮಾನಗಳು ಲಖನೌನತ್ತ ಮಾರ್ಗ ಬದಲಿಸಿದೆ. ಒಂದೇ ಒಂದು ಗಂಟೆಯಲ್ಲಿ ಸುಮಾರು 100 ಮಿಲಿ ಮೀಟರ್​ನಷ್ಟು ಮಳೆ ಬಿದ್ದಿದ್ದು, ದೆಹಲಿ ಹೆಚ್ಚು ಕಡಿಮೆ ನದಿಯಂತಾಗಿದೆ.

ತಗ್ಗು ಪ್ರದೇಶಗಳು ರಸ್ತೆಗಳೆಲ್ಲಾ ಅಕ್ಷರಶಃ ನೀರಿನಲ್ಲಿ ನಿಂತಿವೆ. ದೆಹಲಿಯಲ್ಲಿ ಒಂದು ಗಂಟೆ ಮಳೆಯಾದರೆ ರಸ್ತೆಗಳು ನದಿಯಂತಾಗುತ್ತವೆ. ಆದರೆ ಎಡಬಿಡದೆ ಸುರಿಯುತ್ತಿರುವ ಮಳೆ ದೆಹಲಿಯನ್ನು ಹೈರಾಣು ಮಾಡಿ ಬಿಟ್ಟಿದೆ.

ದೆಹಲಿಯಲ್ಲಿ ಸಾಮಾನ್ಯ ಮಳೆ ಬಿದ್ದರೆ ಯಮುನೆ ಉಕ್ಕಿ ಹರಿಯುತ್ತದೆ. ಈ ರಣಭೀಕರ ಮಳೆಗೆ ರಣಚಂಡಿಯಂತೆ ಉಗ್ರವಾಗಿ ಹರಿಯುತ್ತಿದ್ದಾಳೆ. ಇಷ್ಟು ಸಾಲದೆಂಬಂತೆ, ಮುಂದಿನ 24 ಗಂಟೆಗಳ ಕಾಲ ಈ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಿಸಿದೆ.

ಆಗಸ್ಟ್ 5ರವರೆಗೆ ದೆಹಲಿಯಲ್ಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಮಳೆ ಮುಂದವರಿಯಲಿದೆ ಎಂದು ಹೇಳಲಾಗಿದೆ. ದೆಹಲಿಯಲ್ಲಿಯೂ ಸಹ ಭೀಕರ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಗಂಟೆಗಟ್ಟಲೆಯವರೆಗೆ ಆಗುತ್ತಿದೆ.

ಲೂಟ್ನೀಸ್ ದೆಹಲಿ, ಕಶ್ಮೇರಾ ಗೇಟ್, ರಾಜೇಂದ್ರನಗರ ಈ ಪ್ರದೇಶಗಳು ಭೀಕರ ಮಳೆಗೆ ನಲುಗಿ ಹೋಗಿವೆ. ಇನ್ನು ಹಲವು ಪ್ರದೇಶಗಳಲ್ಲಿ ರಸ್ತೆಯ ಮೇಲೆ ಮೊಣಕಾಲಿನವರೆಗೂ ನೀರು ಹರಿಯುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರಿಗೆ ಇವುಗಳೆಲ್ಲವನ್ನು ಸರಿಯಾಗಿ ನಿರ್ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

https://x.com/ANI/status/1818664965638963504?