ರಾಜಸ್ಥಾನ: ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಹಲವೆಡೆ ಅನಾಹುತಗಳು ಸಂಭವಿಸುತ್ತಿವೆ. ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ.

ಜೈಪುರದ ಕಣನೋಟಾ ಅಣೆಕಟ್ಟಿನಲ್ಲಿ ಭಾನುವಾರದಂದು ಐವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆರು ಜನರು ಅಣೆಕಟ್ಟಿನಲ್ಲಿ ಸ್ನಾನಕ್ಕೆಂದು ಹೋದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದರಲ್ಲಿ ಓರ್ವ ಬದುಕುಳಿದಿದ್ದಾನೆ.

ಭರತ್​ಪುರದಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಒಂದೇ ಕುಟುಂಬದ 7 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸದ್ಯ ನಾಪತ್ತೆಯಾದವರಿಗೆ ಹುಡುಕಾಟ ನಡೆಯುತ್ತಿದೆ.

ಶ್ರೀನಗರ ಗ್ರಾಮದ 8 ಯುವಕರು ಭರತ್​ಪುರದ ಬಂಗಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಅಳವಾದ ನದಿಗೆ ಒಬ್ಬರಂತೆ ಒಬ್ಬರು ಬಿದ್ದು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಮಳೆಯ ಅವಾಂತರ ಜೋರಾಗಿದೆ. ಹೀಗಾಗಿ ಮುಖ್ಯಮಂತ್ರಿ ಭಜನ್​ಲಾಲ್​ ಶರ್ಮಾ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮಳೆಯಿಂದ ಸಂಕಷ್ಟ ಎದುರಾದ ನಾಲ್ಕು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಅಲ್ಲಿನ ಒಳಚರಂಡಿ, ಕುಡಿಯುವ ನೀರು, ಆಹಾರ, ಔಷಧಿ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಸರಿಯಾಗಿ ತಿಳಿಯಲು ಅಧಿಕಾರಿಗಳಿಗೆ ಹೇಳಿದ್ದಾರೆ. ಹಾನಿಗೊಳಗಾದ ಪ್ರದೇಶಗಳಿಗೆ ಆದಷ್ಟು ಬೇಗ ನೀರು ಮತ್ತು ವಿದ್ಯುತ್​ ಪೂರೈಕೆ ಪುನರ್​​ ಸ್ಠಾಪಿಸಬೇಕು ಎಂದು ತಿಳಿಸಿದ್ದಾರೆ.