ನವದೆಹಲಿ: ಸುಪ್ರೀಂಕೋರ್ಟ್ನಿಂದ ದಯಾಮರಣಕ್ಕೆ ಅನುಮತಿ ಪಡೆದಿದ್ದ ಉತ್ತರ ಪ್ರದೇಶದ ಹರೀಶ್ ರಾಣಾ 13 ವರ್ಷಗಳ ನರಳಾಟದ ಬಳಿಕ ಕೊನೆಯುಸಿರೆಳೆದಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದೆ. 31 ವರ್ಷದ ಹರೀಶ್ ರಾಣಾ 2013ರಲ್ಲಿ ಪಂಜಾಬ್ ವಿವಿಯಲ್ಲಿ ಬಿಟೆಕ್ ಓದುವಾಗ ಹಾಸ್ಟೆಲ್ನ 4ನೇ ಫ್ಲೋರ್ನಿಂದ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟುಮಾಡಿಕೊಂಡಿದ್ದರು. ಅಂದಿನಿಂದ ಬ್ರೇನ್ಡೆಡ್ ಆಗಿದ್ದ ರಾಣಾಗೆ ತಂದೆ-ತಾಯಿಯೇ ಎಲ್ಲದಕ್ಕೂ ಆಸರೆಯಾಗಿದ್ದರು.
ಮಾರ್ಚ್ 11ರಂದು ಸುಪ್ರೀಂಕೋರ್ಟ್ ದೇಶದಲ್ಲಿ ಇದೇ ಮೊದಲ ಬಾರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತ್ತು. ರಾಣಾಗೆ ನೀಡಿದ್ದ ʼಲೈಫ್ ಸಪಪೋರ್ಟ್’ ತೆಗೆದು ಗೌರವಯುತವಾಗಿ ಬೀಳ್ಕೊಡುವಂತೆ ಏಮ್ಸ್ ವೈದ್ಯರಿಗೆ ಸೂಚಿಸಿತ್ತು.
ಆ ಬಳಿಕ ಮಾರ್ಚ್ 14ರಂದು ಏಮ್ಸ್ ಆಸ್ಪತ್ರೆಗೆ ರಾಣಾನನ್ನು ಶಿಫ್ಟ್ ಮಾಡಲಾಗಿತ್ತು. ಅನಸ್ತೇಶಿಯಾ & ಉಪಶಮನ ಔಷಧ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಮಿಶ್ರಾ ತಂಡವು ಕೃತಕ ಪೋಷಣಾ ಕ್ರಮಗಳನ್ನು ವಾಪಸ್ ತೆಗೆಯುತ್ತಾ ಬಂದಿತ್ತು. ಇಂದು ಅಂತಿಮವಾಗಿ ಹರೀಶ್ ರಾಣಾ ತಮ್ಮ ಉಸಿರಾಟವನ್ನು ನಿಲ್ಲಿಸಿದ್ದಾರೆ.

