ತಿರುವನಂತಪುರಂ : ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ, ಕೀಮೊಥೆರಪಿ, ಕ್ಷಕಿರಣ ಹಾಗೂ ಇನ್ನಿತರ ವೈದ್ಯಕೀಯ ತಪಾಸಣೆಗಾಗಿ ರಾಜ್ಯದೊಳಗೆ ಅಥವಾ ರಾಜ್ಯದ ಹೊರಗಿನ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲಾ ಆಸ್ಪತ್ರೆಗಳಿಗೆ ತೆರಳುವ ಕ್ಯಾನ್ಸರ್ ರೋಗಿಗಳು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೇರಳ ಸರಕಾರ ತಿಳಿಸಿದೆ.

ಗುರುವಾರ ಕೇರಳ ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್, ಕ್ಯಾನ್ಸರ್ ಪೀಡಿತ ರೋಗಿಗಳು ಕ್ಯಾನ್ಸರ್ ತಜ್ಞರು ತಮಗೆ ನೀಡಿರುವ ಪ್ರಮಾಣ ಪತ್ರವನ್ನು ಪುರಾವೆಯನ್ನಾಗಿ ತೋರಿಸಿ ಕೇರಳ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣಿಸಬಹುದು.

ಕೇರಳ ಸರಕಾರದ ಈ ನಿರ್ಧಾರವು 2012ರಲ್ಲಿ ಉಮ್ಮನ್ ಚಾಂಡಿ ನೇತೃತ್ವದ ಸರಕಾರ ಘೋಷಿಸಿದ್ದ ಕ್ಯಾನ್ಸರ್ ರೋಗಿಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಪ್ರಯಾಣಿಸುವ ಸೌಲಭ್ಯಕ್ಕಿಂತ ಇದು ಸುಧಾರಿತ ಕ್ರಮವಾಗಿದೆ ಎಂದು ಹೇಳಿದರು. ಕ್ಯಾನ್ಸರ್ ರೋಗಿಗಳು ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಸೂಪರ್ ಫಾಸ್ಟ್, ಡಿಲಕ್ಸ್ ಹಾಗೂ ಎಸಿ ಬಸ್‌ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶವಿದೆ ಎಂದು ಹೇಳಿದರು.