ಚಂಡೀಗಡ: ಪಂಜಾಬ್‌ನಲ್ಲಿ ಭಾರೀ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಹಿಮಾಚಲ ಪ್ರದೇಶದ ಒಂದೇ ಕುಟುಂಬದ ಎಂಟು ಜನ ಸೇರಿದಂತೆ ಒಂಬತ್ತು ಮಂದಿ ಕೊಚ್ಚಿ ಹೋಗಿದ್ದಾರೆ. ಇನ್ನು ದುರ್ಘಟನೆಯಲ್ಲಿ ಇಬ್ಬರು ಕಣ್ಮರೆಯಾಗಿದ್ದಾರೆ. ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಪ್ರವಾಹಕ್ಕೆ ಅನೇಕ ವಾಹನಗಳು ಕೊಚ್ಚಿ ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರ್ ಬ್ಲಾಕ್‌ನಲ್ಲಿ SUV ವಾಹನ ನದಿಯಲ್ಲಿ ಕೊಚ್ಚಿಹೋಗಿದೆ. ಪಂಜಾಬ್‌ನ ಹಲವಾರು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್‌ಪುರ ಬಳಿಯ ಡೆಹ್ರಾದಿಂದ ಪಂಜಾಬ್‌ನ ಎಸ್‌ಬಿಎಸ್ ನಗರ ಜಿಲ್ಲೆಯ ಮೆಹ್ರೋವಾಲ್ ಗ್ರಾಮಕ್ಕೆ ಮದುವೆಗೆ ಹಾಜರಾಗಲು ಚಾಲಕನ ಸಮೇತ ಕುಟುಂಬದ 11 ಸದಸ್ಯರು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷದ ಮಗುವನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಿದ್ದಾರೆ. ಪಂಜಾಬ್‌ನ ನವನ್‌ಶಹರ್‌ನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡು 11 ಮಂದಿ ಎಸ್‌ಯುವಿಯಲ್ಲಿ ಪ್ರಯಾಣಿಸಿ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಪೋಲೀಸರ ಪ್ರಕಾರ, ಕುಟುಂಬವು ಮದುವೆ ಮುಗಿಸಿಕೊಂಡು ವಿಹಾರಕ್ಕೆ ಹೋಗುತ್ತಿದ್ದಾಗ ಪ್ರವಾಹದ ನೀರಿನಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಮೃತರನ್ನು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್‌ಪುರ ಸಮೀಪದ ಡೆಹ್ಲಾನ್ ಗ್ರಾಮದ ನಿವಾಸಿ ದೀಪಕ್ ಭಾಟಿಯಾ ಎಂದು ಗುರುತಿಸಲಾಗಿದ್ದು, ಅವರ ತಂದೆ ಸುರ್ಜಿತ್ ಭಾಟಿಯಾ, ತಾಯಿ ಪರಮ್‌ಜೀತ್ ಕೌರ್, ಚಿಕ್ಕಪ್ಪ ಸರೂಪ್ ಚಂದ್, ಚಿಕ್ಕಮ್ಮ ಬಂಡಾರ್ ಮತ್ತು ಶಿನೋ, ಪುತ್ರಿಯರಾದ ಭಾವನಾ ಮತ್ತು ಅಂಕು ಮೃತಪಟ್ಟಿದ್ದಾರೆ.

ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಒಂಬತ್ತು ಜನರ ಸಾವಿನ ಸುದ್ದಿ ದುಃಖಕರವಾಗಿದೆ. “ನಾನು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

https://x.com/Weathermonitors/status/1822559243448263037?