ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ಅದ್ಧೂರಿ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದೇ ಬಂದಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಮುಂಬೈನ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ʻಶುಭ ಆಶೀರ್ವಾದʼ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಿಲ್ಲದೇ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು, ಕೇಸ್‌ ದಾಖಲಿಸಿದ್ದಾರೆ.

ಆಹ್ವಾನವಿಲ್ಲದೇ ಪ್ರವೇಶಿಸಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬರು ಯೂಟ್ಯೂಬರ್ ವೆಂಕಟೇಶ್ ನರಸಯ್ಯ ಅಲ್ಲೂರಿ (26), ಮತ್ತೊಬ್ಬ ವ್ಯಕ್ತಿ ಲುಕ್ಮಾನ್ ಮೊಹಮ್ಮದ್ ಶಫಿ ಶೇಖ್ (28) ಎಂದು ಗುರುತಿಸಲಾಗಿದೆ.

ಶಫಿ ತನ್ನನ್ನು ಉದ್ಯಮಿ ಅಂತ ಹೇಳಿಕೊಂಡು ಜಿಯೋ ವರ್ಲ್ಡ್‌ ಸೆಂಟರ್‌ಗೆ ಪ್ರವೇಶಿಸಿದ್ದ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದ ಮುಂಬೈನ ಬಿಕೆಸಿ ಪೊಲೀಸರು ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.