ಲಖನೌ: ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ ವಿರುದ್ಧ ಮೊದಲ ಕೇಸ್ ದಾಖಲಾಗಿದೆ. ಪಾಟ್ನಾ ಕೋರ್ಟ್ನಲ್ಲಿ ಭೋಲೇ ಬಾಬಾನ ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೂವರು ಸದಸ್ಯರ ಕಾನೂನು ಆಯೋಗವನ್ನು ನೇಮಿಸಿ ಪ್ರಕರಣದ ತನಿಖೆಗೆ ಆದೇಶಿಸಿದೆ. ನಿವೃತ ಹೈಕೋರ್ಟ್ ನ್ಯಾಯಮೂರ್ತಿ ಈ ಆಯೋಗದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ, ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ ಇದೀಗ ಮಾಧ್ಯಮದ ಜತೆ ಮಾತನಾಡಿ, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಸತ್ಸಂಗ ಕಾರ್ಯಕ್ರಮ ಬಳಿಕ ನಡೆದ ಈ ಘಟನೆಯಿಂದ ತೀವ್ರ ದುಃಖಿತನಾಗಿ ಖಿನ್ನತೆಗೆ ಜಾರಿರುವುದಾಗಿ ಅವರು ತಿಳಿಸಿದ್ದಾರೆ.
ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಎಂದು ಗುರುತಿಸಿಕೊಂಡಿರುವ ಸೂರಜ್ಪಾಲ್ ಅವರು ಕಾಲ್ತುಳಿತದ ಪ್ರಮುಖ ಆರೋಪಿ ದೇವ್ಪ್ರಕಾಶ್ ಮಧುಕರ್ ನವದೆಹಲಿಯಲ್ಲಿ ಪೊಲೀಸರ ಮುಂದೆ ಶರಣಾದ ಕೆಲವೇ ಗಂಟೆಗಳ ನಂತರ ಶನಿವಾರ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದರು. ನಂತರ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

