ಭುವನೇಶ್ವರ: ಮಹಿಳಾ ಪತ್ರಕರ್ತೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

ಸಾವಿಗೂ ಮುನ್ನ ವಿಡಿಯೋ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಪತಿಯ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. ಮೃತ ಮಧುಮಿತಾ ಪರಿದಾ (28) ಸ್ಥಳೀಯ ಸುದ್ದಿ ಮಾಧ್ಯಮದಲ್ಲಿ ಕಾಪಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದು, ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು.

ಸಾವಿಗೂ ಮುನ್ನ ತನ್ನ ಪತಿಯಿಂದ ಉಂಟಾದ ಕಿರುಕುಳ ಬಗ್ಗೆ ಹೇಳಿಕೊಂಡಿದ್ದು, ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಲಿಂಗಪುರ ಪ್ರದೇಶದಲ್ಲಿದ್ದ ದೇವಸ್ಥಾನದ ಬಳಿಯ ರೈಲ್ವೇ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಧುಮಿತಾ ಸಾವಿನ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಮಧುಮಿತಾ ಪತಿಗೆ ಆಕೆಯ ಸಂಬಂಧಿಕರು ಸ್ಥಳದಲ್ಲೇ ಥಳಿಸಿದ್ದಾರೆ ಎನ್ನಲಾಗಿದೆ. ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಮಧುಮಿತಾಗೆ ಇತ್ತೀಚಿಗಷ್ಟೇ ತನ್ನ ಗಂಡ ನನಗೆ ಮೋಸ ಮಾಡಿ ಬೇರೆ ಮಹಿಳೆಯೊಂದಿಗೆ ಸಂಬಂಧ ಬೆಳೆಸಿರುವುದು ತಿಳಿದುಬಂದಿದೆ. ಇದಲ್ಲದೇ ಪತಿಯಿಂದ ಅನುಭವಿಸಿದ ಕಿರುಕುಳದ ಬಗ್ಗೆ ಮಧುಮಿತಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.