ತಿರುವನಂತಪುರ: ಸಾಕಾನೆಯೊಂದು ಮಾವುತನನ್ನು ತುಳಿದು ಸಾವನ್ನಪಿರುವ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 20 ಗುರುವಾರ ಈ ಘಟನೆ ನಡೆದಿದ್ದು, ಬೆಚ್ಚಿಬೀಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯದವಾಗಿ ಮಾವುತನನ್ನು ಕೊಂದಿರುವ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ದಿ ಹಿಂದೂ ವರದಿ ಪ್ರಕಾರ, ಇಡುಕ್ಕಿಯ ಸಫಾರಿ ಕೇಂದ್ರದಲ್ಲಿ ಆನೆಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಮಾವುತನ ಸಾವಿನ ಬಳಿಕ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಮೃತ ಮಾವುತನನ್ನು 62 ವರ್ಷದ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ತಪ್ಪಿದ ದೊಡ್ಡ ಅನಾಹುತ:
ಮೃತ ಮಾವುತ ಬಾಲಕೃಷ್ಣ ನೀಲೇಶ್ವರಂ ನಿವಾಸಿಯಾಗಿದ್ದು, ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆನೆ ದಾಳಿಗೂ ಮುನ್ನ ಮಾವುತ ಬಾಲಕೃಷ್ಣ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಸಿದ್ಧವಾಗಿದ್ದರು. ಅದಕ್ಕೂ ಮೊದಲು ಘಟನೆ ನಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.