ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಅಹೇರಿ ತಾಲೂಕಿನ ದಂಪತಿಗಳು ತಮ್ಮ ಮಕ್ಕಳ ಮೃತ ದೇಹಗಳನ್ನು ಹೊತ್ತೊಯ್ಯುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಹಂಚಿಕೊಂಡಿದ್ದಾರೆ.
10 ವರ್ಷದೊಳಗಿನ ಇಬ್ಬರು ಗಂಡು ಮಕ್ಕಳು ಜ್ವರಕ್ಕೆ ತುತ್ತಾಗಿದ್ದರು. ಆದರೆ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಆರೋಗ್ಯ ಹದಗೆಟ್ಟು ಬಳಲಿದ್ದರು.
ಇದರಿಂದ ಕಂಗೆಟ್ಟ ದಂಪತಿ ಕೊನೆಗೆ ಗಡ್ಚಿರೋಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಸಹ ವೈದ್ಯರ ನಿರ್ಲಕ್ಷ್ಯದಿಂದ ಮಕ್ಕಳಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ.
ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ನತದೃಷ್ಟದಂಪತಿ ಕಣ್ಣೀರಲ್ಲಿ ಕೈತೊಳೆದಿದ್ದಾರೆ. ಅವರ ಗೋಳು ಮುಗಿಲುಮುಟ್ಟಿದೆ. ಆದರೆ ಆ ಮಕ್ಕಳ ಶವ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಅವರು 15ಕಿಮೀ ದೂರದ ಗಡ್ಚಿರೋಲಿಗೆ ಕೆಸರಿನಲ್ಲಿಯೇ ನಡೆದು ಹೋಗಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ವೈರಲ್ ಆಗಿದೆ. ನೆಟ್ಟಿಗರು ಸರ್ಕಾರ ಮತ್ತು ಆಡಳಿತವನ್ನು ಟೀಕಿಸುತ್ತಿದ್ದಾರೆ.

